ADVERTISEMENT

‘ಜಾತಿ ವ್ಯವಸ್ಥೆ ತೊಲಗಿಸಲು ಯುವಕರು ಶ್ರಮಿಸಲಿ’-ಸಿದ್ದಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 16:57 IST
Last Updated 4 ಏಪ್ರಿಲ್ 2021, 16:57 IST
ಸಿದ್ದಲಿಂಗಯ್ಯ ಅವರು ಬಟಾಬಯಲು ಕವನ ಸಂಕಲನ ಬಿಡುಗಡೆ ಮಾಡಿದರು. (ಎಡದಿಂದ) ಪುಸ್ತಕದ ಲೇಖಕ ಮುದಿಗೆರೆ ರಮೇಶ್ ಕುಮಾರ್, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮತ್ತು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಇದ್ದಾರೆ -ಪ್ರಜಾವಾಣಿ ಚಿತ್ರ
ಸಿದ್ದಲಿಂಗಯ್ಯ ಅವರು ಬಟಾಬಯಲು ಕವನ ಸಂಕಲನ ಬಿಡುಗಡೆ ಮಾಡಿದರು. (ಎಡದಿಂದ) ಪುಸ್ತಕದ ಲೇಖಕ ಮುದಿಗೆರೆ ರಮೇಶ್ ಕುಮಾರ್, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮತ್ತು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಹಾತ್ಮ ಗಾಂಧಿ, ಬಿ.ಆರ್‌.ಅಂಬೇಡ್ಕರ್‌, ಬಸವೇಶ್ವರ, ರಾಮಮನೋಹರ ಲೋಹಿಯಾ, ಬುದ್ಧ ಹೀಗೆ ಅನೇಕರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಈ ಪಿಡುಗನ್ನು ಬುಡಸಹಿತ ಕಿತ್ತೊಗೆಯಲು ಪ್ರಯತ್ನಿಸಿದರು. ಈ ಮಹಾನ್ ಚೇತನರ ಹಾದಿಯಲ್ಲೇ ಇಂದಿನ ಯುವಕರೂ ಸಾಗಬೇಕು’ ಎಂದು ಕವಿ ಸಿದ್ದಲಿಂಗಯ್ಯ ಭಾನುವಾರ ಹೇಳಿದರು.

ಕರ್ನಾಟಕ ಅಂಧರ ವಿಮೋಚನಾ ವೇದಿಕೆ, ಆಶ್ರಯ ಅಂಗವಿಕಲರ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಕಲ್ಯಾಣ ಸಂಸ್ಥೆಯ ಸಹಯೋಗದಲ್ಲಿ ನಡೆದ ಮುದಿಗೆರೆ ರಮೇಶ್‌ಕುಮಾರ್ ಅವರ ‘ಬಟಾಬಯಲು’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಮನುಷ್ಯ ಜಾತಿ ಇರುವವರೆಗೂ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಲ್ಲ ಎಂಬ ಮಾತಿದೆ. ಕುಡಿಯುವಾಗ, ಜೂಜಾಡುವಾಗ ಜಾತಿ ಅಡ್ಡಿ ಬರುವುದಿಲ್ಲ. ಬಾರ್‌ಗಳಲ್ಲಿ ಎಲ್ಲರೂ ಸಹೋದರರೇ. ಎರಡು ಮೂರು ಪೆಗ್‌ ಒಳಗೆ ಸೇರಿದೊಡನೆ ಪ್ರೀತಿ ಉಕ್ಕಿ ಬರುತ್ತದೆ. ಪರಸ್ಪರ ಅಪ್ಪಿಕೊಂಡು ಕಣ್ಣೀರು ಹಾಕುತ್ತಾರೆ. ಬಾರ್‌ಗಳಿಂದ ಜಾತಿ ವ್ಯವಸ್ಥೆ ತೊಲಗಿರಬಹುದು ಆದರೆ ಸಮಾಜದಿಂದಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ADVERTISEMENT

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ‘ರಮೇಶ್‌ ಅವರು ಬಟಾಬಯಲು ಕವನ ಸಂಕಲನದ ಮೂಲಕ ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಅವರು ಅನೇಕ ನುಡಿಗಟ್ಟುಗಳ ಮೂಲಕ ತಮ್ಮ ಬದುಕಿನ ಸಾರ್ಥಕತೆಯನ್ನು ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ’ ಎಂದರು.

ಕೃತಿಯ ಕುರಿತು ಮಾತನಾಡಿದ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ‘ಹುಟ್ಟಿನಿಂದಲೇ ಅಂಧರಾಗಿರುವ ರಮೇಶ್‌ ಅವರು ಅಂದವಾದ ಕವಿತೆಗಳನ್ನು ಬರೆದಿದ್ದಾರೆ. ಕವಿತೆಯು ಮನುಕುಲದ ಬಿಡುಗಡೆಯ ಅಸ್ತ್ರ ಎಂಬುದನ್ನು ಪ್ರತಿಪಾದಿಸಿದ್ದಾರೆ. ಭರತ, ಯುದಿಷ್ಠಿರ ಸೇರಿದಂತೆ ಅನೇಕ ಪುರಾಣ ಪಾತ್ರಗಳ ಕುರಿತೂ ಅವರು ಕವಿತೆಗಳನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಾಯಕ ಜನಾರ್ಧನ್‌ (ಜನ್ನಿ) ಅವರಿಗೆ ಗಾನಯೋಗಿ ಪುಟ್ಟರಾಜ ಗವಾಯಿ ಸಂಗೀತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಅಂಧರ ವಿಮೋಚನಾ ವೇದಿಕೆಯ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಗವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.