
ಬೆಂಗಳೂರು: ‘ಔಷಧೀಯ ಕ್ಷೇತ್ರ ಈಗ ಕೇವಲ ವಾಣಿಜ್ಯೋದ್ಯಮವಾಗಿ ಉಳಿದಿಲ್ಲ. ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪ್ರಮುಖ ಆಧಾರಸ್ತಂಭ. ರೋಗಕ್ಕೆ ಚಿಕಿತ್ಸೆ ನಾಣ್ಯದ ಒಂದು ಮುಖವಾದರೆ, ಅದರ ತಡೆಗಟ್ಟುವಿಕೆ ಇನ್ನೊಂದು ಮುಖ’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಬಿ.ಸಿ.ಭಗವಾನ್ ಅಭಿಪ್ರಾಯಪಟ್ಟರು.
ನಿಟ್ಟೆ ಕಾಲೇಜ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್ನ ದ್ವಿತೀಯ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲಾಗಿದೆ ಎಂದರು.
‘ಭವಿಷ್ಯದ ದಿನಗಳಲ್ಲಿ ಔಷಧ ವಿಜ್ಞಾನಿಗಳು ಸಂಶೋಧನೆಗಳಿಂದ ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೊಸತುಗಳನ್ನು ಪರಿಚಯಿಸಲಿದ್ದಾರೆ. ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರತ್ಯೇಕ ಸಂಶೋಧನಾ ನಿಧಿ ಒದಗಿಸಲಾಗುತ್ತಿದೆ. ಯುವ ಸಂಶೋಧಕರು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಗಳನ್ನು ಮುಂಬರುವ ದಿನಗಳಲ್ಲಿ ತರಲಿದ್ದಾರೆ’ ಎಂದು ತಿಳಿಸಿದರು.
ಇದೇ ವೇಳೆ 63 ವಿದ್ಯಾರ್ಥಿಗಳಿಗೆ ಬಿ ಫಾರ್ಮಾ ಪದವಿ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾಲಯ ಮಟ್ಟದಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದಕ್ಕಾಗಿ ವಿದ್ಯಾರ್ಥಿನಿ ಲಾವಣ್ಯ ಚಿನ್ನದ ಪದಕ ಸ್ವೀಕರಿಸಿದರು.
ತೇಜನಾ ಕನ್ಸಲ್ಟಿಂಗ್ ಎಲ್.ಎಲ್.ಪಿಯ ಸಂಸ್ಥಾಪಕ ಡಾ. ಕ್ರತೀಶ್ ಬೋಪಣ್ಣ ಮಾತನಾಡಿ, ‘ಭಾರತದ ಔಷಧೀಯ ಉದ್ಯಮ ಇಂದು ವಿಶ್ವದ ಶಕ್ತಿಕೇಂದ್ರಗಳಲ್ಲಿ ಒಂದಾಗಿದೆ. ವಿಸ್ತಾರದಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನ ಗಳಿಸಿದೆ ಎಂದರು.
ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಎಚ್.ಸಿ. ನಾಗರಾಜ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯ ಕರುಣಾಕರ ರೈ, ನಿಟ್ಟೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲೆ ವಿ. ಕುಸುಮ್ ದೇವಿ ಸ್ವಾಗತಿಸಿದರು. ಪ್ರಾಧ್ಯಾಪಕಿ ವೇದಾ ಬಿ. ಹಚ್ಚೊಳ್ಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.