ADVERTISEMENT

ತಳ್ಳುಗಾಡಿಯಲ್ಲಿ ಧ್ವನಿವರ್ಧಕ ಬಳಕೆ: ದೂರು

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 20:06 IST
Last Updated 17 ಜುಲೈ 2021, 20:06 IST
ಬೆಂಗಳೂರು ಪೊಲೀಸ್‌ ಕಮಿಷನರ್ ಕಮಲ್ ಪಂಥ್
ಬೆಂಗಳೂರು ಪೊಲೀಸ್‌ ಕಮಿಷನರ್ ಕಮಲ್ ಪಂಥ್   

ಬೆಂಗಳೂರು: ‘ಅನುಮತಿ ಇಲ್ಲದೇ ಧ್ವನಿವರ್ಧಕ ಬಳಸಲು ಅವಕಾಶವಿಲ್ಲ. ತಳ್ಳುಗಾಡಿಯಲ್ಲಿ ಧ್ವನಿವರ್ಧಕ ಬಳಕೆ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ನಗರದ ಪೊಲೀಸ್‌ ಕಮಿಷನರ್ ಕಮಲ್ಪಂಥ್ ತಿಳಿಸಿದರು.

ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಸಂಬಂಧಿತ ಸಮಸ್ಯೆಗಳನ್ನು ಆಲಿಸಲು ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ನೇರ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರ ಪ್ರಶ್ನೆಗೆ ಅವರು ಶನಿವಾರ ಉತ್ತರಿಸಿದರು.

‘ತರಕಾರಿ ಸೇರಿ ವಿವಿಧ ವಸ್ತುಗಳನ್ನು ಮಾರಾಟ ಮಾಡಲು ಬರುವ ತಳ್ಳುಗಾಡಿಯಲ್ಲಿ ಧ್ವನಿವರ್ಧಕ ಬಳಸಲಾಗುತ್ತಿದ್ದು, ಕಿರಿಕಿರಿ ಆಗುತ್ತಿದೆ’ ಎಂದು ಸಾರ್ವಜನಿಕರೊಬ್ಬರು ದೂರಿದರು.

ADVERTISEMENT

ಮನೆ ಕೆಲಸಗಾರರೊಬ್ಬರು, ‘ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಕೆಲ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಕೆಲಸಕ್ಕೆ ಹೋಗಲು ಭದ್ರತಾ ಸಿಬ್ಬಂದಿ ಬಿಡುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಕಮಲ್ ಪಂತ್, ‘ಕೋವಿಡ್ ಸಂದರ್ಭದಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯದ ಸಂಘಗಳು ಹೊರಗಿನವರ ಪ್ರವೇಶ ನಿರ್ಬಂಧಿಸಿರಬಹುದು. ಹೀಗಾಗಿ, ಎಲ್ಲರೂ ಸಹಕರಿಸಬೇಕು’ ಎಂದರು.

ರಸ್ತೆ ವಿಸ್ತರಣೆಗೆ ಚಿಂತನೆ: ‘ನಗರದ ಕೆಲ ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಿದೆ. ಅಂಥ ರಸ್ತೆಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಿ’ ಎಂದು ಸಾರ್ವಜನಿಕರೊಬ್ಬರು ವಿನಂತಿಸಿದರು.

‘ರಸ್ತೆ ವಿಸ್ತರಣೆ ತ್ವರಿತವಾಗಿ ಆಗುವ ಕೆಲಸವಲ್ಲ. ಈ ಬಗ್ಗೆ ಚಿಂತನೆ ನಡೆಸಲಾಗುವುದು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು’ ಎಂದು ಕಮಲ್ ಪಂತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.