ADVERTISEMENT

ಬೆಂಗಳೂರು: ಸ್ವಿಗ್ಗಿ, ಜೊಮ್ಯಾಟೊ ‘ಡೆಲಿವರಿ ಬಾಯ್ಸ್’ ಸಾವು

ಯಶವಂತಪುರ, ಎಚ್‌ಎಎಲ್‌ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪಘಾತ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 14:20 IST
Last Updated 13 ಜನವರಿ 2024, 14:20 IST
   

ಬೆಂಗಳೂರು: ಯಶವಂತಪುರ ಹಾಗೂ ಎಚ್‌.ಎ.ಎಲ್‌ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಸ್ವಿಗ್ಗಿ ಹಾಗೂ ಜೊಮ್ಯಾಟೊ ಸಂಸ್ಥೆಗಳಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ.

ಮತ್ತಿಕೆರೆಯ ಜೆ.ಪಿ. ಉದ್ಯಾನದ ಟ್ಯಾಂಕ್‌ ಬಂಡ್‌ ರಸ್ತೆಯಲ್ಲಿ ಡಿವೈಡರ್‌ಗೆ ಬೈಕ್‌ ಡಿಕ್ಕಿಯಾಗಿ ಸ್ವಿಗ್ಗಿ ಡೆಲಿವರಿ ಬಾಯ್‌, ಮತ್ತಿಕೆರೆ ಎಚ್‌ಎಂಆರ್‌ ಬಡಾವಣೆಯ ನಿವಾಸಿ ಎಲ್‌.ಎಂ.ಅನಿಲ್‌ಕುಮಾರ್‌ (29) ಸ್ಥಳದಲ್ಲೇ ಮೃತಪಟ್ಟಿದ್ಧಾರೆ.

‘ವೇಗವಾಗಿ ತೆರಳುತ್ತಿದ್ದಾಗ, ಸವಾರನ ನಿಯಂತ್ರಣ ತಪ್ಪಿದ ಬೈಕ್‌ ಡಿವೈಡರ್‌ಗೆ ಡಿಕ್ಕಿ ಹೊಡಿದಿದೆ. ಕಬ್ಬಿಣದ ಗ್ರಿಲ್‌ ತಲೆ ಹಾಗೂ ಎದೆಯ ಭಾಗಕ್ಕೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು’ ಎಂದು ಸಂಚಾರ ಪೊಲೀಸರು ತಿಳಿಸಿದರು.

ADVERTISEMENT

ಸುರಂಜನಾ ದಾಸ್‌ ರಸ್ತೆಯ ಎಚ್‌ಎಎಲ್‌ ಆಸ್ಪತ್ರೆ ಬಳಿ ಶನಿವಾರ ಮುಂಜಾನೆ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಜೊಮ್ಯಾಟೊ ಸಂಸ್ಥೆಯ ಡೆಲಿವರಿ ಬಾಯ್‌ ರಾಜೇಶ್ ಕುಮಾರ್ (32) ಮೃತಪಟ್ಟಿದ್ದಾರೆ.

ರಾಜೇಶ್‌ ಅವರು ಬೈಕ್‌ನಲ್ಲಿ ಎಚ್ಎಎಲ್‌ ಮುಖ್ಯ ಗೇಟ್‌ ಕಡೆಯಿಂದ ಜೆ.ಬಿ.ನಗರ ಕ್ರಾಸ್‌ ಕಡೆಗೆ ತೆರಳುತ್ತಿದ್ದರು. ಆಗ ವೇಗವಾಗಿ ಬಂದ ಕ್ಯಾಬ್‌ವೊಂದು ಬೈಕ್‌ಗೆ ಡಿಕ್ಕಿಯಾಗಿದೆ. ರಸ್ತೆಯ ಮೇಲೆ ಬಿದ್ದ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಅವರು ಮೃತಪಟ್ಟಿದ್ಧಾರೆ’ ಎಂದು ಪೊಲೀಸರು ಹೇಳಿದರು.

‘ಕ್ಯಾಬ್‌ನ ಚಾಲಕ ಪರಾರಿಯಾಗಿದ್ದು ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.