ಬೆಂಗಳೂರು: ಉತ್ತರ ತಾಲ್ಲೂಕಿನ ರಾಜಾನುಕುಂಟೆ ಸಮೀಪದ ಕಾಕೋಳು ಗ್ರಾಮದ ಜನ, ತಮ್ಮೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಓಂಕಾರ್ ನಾಯಕ್ ಮತ್ತು ಅವರ ಪತ್ನಿ ಲಲಿತಮ್ಮ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ವಾದ್ಯಘೋಷ, ಕಳಸಗಳೊಂದಿಗೆ ಇಡೀ ಗ್ರಾಮದಲ್ಲಿ ಕರೆದೊಯ್ದು, ಪುಷ್ಪಾರ್ಚನೆ ಮಾಡುವ ಮೂಲಕ, ‘ಸೇವೆಯೇ ಸರ್ವಸ್ವ’ ಎಂದೇ ಭಾವಿಸಿದ ಶಿಕ್ಷಕರಿಗೆ ಅರ್ಥಪೂರ್ಣ ಬೀಳ್ಕೊಡುಗೆ ನೀಡಿದರು. ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಶಿಕ್ಷಕರು, ನೂರಾರು ವಿದ್ಯಾರ್ಥಿಗಳು, ಅಕ್ಕಪಕ್ಕದ ಗ್ರಾಮಗಳ ನೂರಾರು ಜನ ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಶಿಕ್ಷಕ ದಂಪತಿ, ಯಲಹಂಕ ತಾಲ್ಲೂಕಿನ ಕಾಕೋಳು ಸುತ್ತಮುತ್ತಲಿನ, ಸೊಣ್ಣೇನಹಳ್ಳಿ, ಹನಿಯೂರು ಹರಕೆರೆ, ಬ್ಯಾತ, ಸೀರೆಸಂದ್ರ, ಚಲ್ಲಹಳ್ಳಿ, ಚನ್ನಸಂದ್ರ, ಸೀತಕೆಂಪನಹಳ್ಳಿ, ದನದ
ಪಾಳ್ಯ, ಕಾರ್ಲಾಪುರ, ಭೈರಾಪುರ ಹಳ್ಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
1973ರಲ್ಲಿ ಆರಂಭವಾದ ಕಾಕೋಳು ಸರ್ಕಾರಿ ಪ್ರೌಢಶಾಲೆಯಲ್ಲಿ ಈಗ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯವರಾದ ನಾಯಕ್ ಅವರು 1984ರಲ್ಲಿ ಈ ಶಾಲೆಗೆ ಬಂದಿದ್ದರು. ನಾಯಕ್ ಅವರ ಸೇವೆಯನ್ನು ಗ್ರಾಮಸ್ಥರು ಸ್ಮರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.