ಮೈಸೂರು: ‘ಕರ್ನಾಟಕವು ಹೊಸ ಸಂಶೋಧನೆಗಳ ತಾಣವಾಗಿದ್ದು, ಇಲ್ಲಿ ನಡೆಯುವ ಹೊಸ ಸಂಶೋಧನೆಗಳನ್ನು ಇಡೀ ಜಗತ್ತು ಎದುರು ನೋಡುತ್ತಿದೆ’ ಎಂದು ಉನ್ನತ ಶಿಕ್ಷಣ, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಇಲ್ಲಿನ ಇನ್ಫೊಸಿಸ್ ಕ್ಯಾಂಪಸ್ನಲ್ಲಿ ಶನಿವಾರ ನಡೆದ ‘ಅನ್ಲೀಶ್–2022’ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ವಿಶ್ವಸಂಸ್ಥೆ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿ ತಲುಪಲು, ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ವಿವಿಧ ದೇಶಗಳ ಎಲ್ಲರೂ ಒಂದೆಡೆ ಸೇರಿದ್ದೇವೆ. ಈ ಗುರಿ ತಲುಪಲು ಪ್ರತಿಯೊಬ್ಬರೂ ಪ್ರಮುಖ ಆದ್ಯತೆ ನೀಡಿ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಹೇಳಿದರು.
ಐಟಿ–ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಮಾತನಾಡಿ, ‘ಭಾರತವು ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿದೆ. ಕೋವಿಡ್ ನಂತರವೂ ಜಿಡಿಪಿಯು ಉತ್ತಮ ಪ್ರಗತಿ (6.5) ದಾಖಲಿಸಿದೆ. ದೇಶದಲ್ಲಿ ಕರ್ನಾಟಕವೇ ಹೊಸ ಸಂಶೋಧನೆಯಲ್ಲಿ ಮೊದಲ ಕ್ರಮಾಂಕ ಪಡೆದಿದ್ದು, ದೇಶದಲ್ಲಿರುವ 100 ಯುನಿಕಾರ್ನ್ಗಳ ಪೈಕಿ ರಾಜ್ಯದಲ್ಲಿಯೇ 40 ಸಂಸ್ಥೆಗಳಿವೆ. ವಿಶ್ವದಲ್ಲಿಯೇ ಬೆಂಗಳೂರು 4ನೇ ಅತೀ ದೊಡ್ಡ ತಾಂತ್ರಿಕ ಕ್ಲಸ್ಟರ್ ಹೊಂದಿದೆ’ ಎಂದು ಹೇಳಿದರು.
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಆಟಲ್ ಇನ್ನೋವೇಷನ್ ಮಿಷನ್ನ ನಿರ್ದೇಶಕ ಡಾ.ಚಿಂತನ್ ವೈಷ್ಣವ್, ಕೆಐಟಿಎಸ್ನ ನಿರ್ದೇಶಕ ಮೀನಾ ನಾಗರಾಜ್ ಇದ್ದರು.
ಏನಿದು ಅನ್ಲೀಶ್?
ಸುಸ್ಥಿರ ಅಭಿವೃದ್ಧಿಯ ಗುರಿ ತಲುಪುವ ನಿಟ್ಟಿನಲ್ಲಿ ಯುವಕರನ್ನು ಒಂದೇ ವೇದಿಕೆಗೆ ತಂದು ವಿನೂತನ ಆಲೋಚನೆಗಳು ಹಾಗೂ ಯೋಜಿತ ಜಾಲ ರೂಪಿಸುವುದು ಅನ್ಲೀಶ್ ಮುಖ್ಯ ಉದ್ದೇಶವಾಗಿದೆ. ವಿಶ್ವದ 167 ದೇಶಗಳ 5 ಸಾವಿರ ಯುವ ಜನರು ಭಾಗವಹಿಸುತ್ತಿದ್ದು. 300 ಸಂಸ್ಥೆಗಳು ಕೈ ಜೋಡಿಸಿವೆ. 2017ರಿಂದ ಮೂರು ಆವೃತ್ತಿಗಳು ಕ್ರಮವಾಗಿ ಡೆನ್ಮಾರ್ಕ್, ಸಿಂಗಪುರ ಹಾಗೂ ಚೀನಾದಲ್ಲಿ ನಡೆದಿದ್ದವು. 4ನೇ ಆವೃತ್ತಿಯು ಇಲ್ಲಿ ಒಂದು ವಾರದವರೆಗೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.