ಬೆಂಗಳೂರು: ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಕ್ಕೆ ಅಗತ್ಯ ಪ್ರಮಾಣದ ರೆಮ್ಡಿಸಿವಿರ್ ಚುಚ್ಚು ಮದ್ದು ಸರಬರಾಜು ಮಾಡದ ಸಿಪ್ಲಾ ಮತ್ತು ಜುಬಿಲಿಯೆಂಟ್ ಔಷಧ ಕಂಪನಿಗಳಿಗೆ ರಾಜ್ಯ ಸರ್ಕಾರ ಮಂಗಳವಾರ ನೋಟಿಸ್ ನೀಡಿದೆ.
‘ನೋಟಿಸ್ ಸಿಕ್ಕಿದ 24 ಗಂಟೆಗಳಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಪೂರೈಸ ಬೇಕು. ಪೂರೈಸದೇ ಇದ್ದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನೋಟಿಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಮೇ 9ರ ಒಳಗೆ ಕರ್ನಾಟಕಕ್ಕೆ 30 ಸಾವಿರ ವೈಯಲ್ಸ್ ರೆಮ್ಡಿಸಿವಿರ್ ಪೂರೈಸುವಂತೆ ಸಿಪ್ಲಾ ಕಂಪನಿಗೆ ಹಾಗೂ 32 ಸಾವಿರ ವೈಯಲ್ಸ್ ಪೂರೈಸುವಂತೆ ಜುಬಿಲಿಯೆಂಟ್ ಕಂಪನಿಗಳಿಗೆ ಮೇ 1 ರಂದು ಸೂಚಿಸಲಾಗಿತ್ತು. ಆದರೆ, ಮೇ 8ರವರೆಗೆ ಸಿಪ್ಲಾ ಕಂಪನಿ 10,840 ಮತ್ತು ಜುಬಿಲಿಯೆಂಟ್ ಕಂಪನಿ 17,601 ವೈಯಲ್ಸ್ ಮಾತ್ರ ಸರಬರಾಜು ಮಾಡಿದೆ.
‘ಕೇಂದ್ರ ಸೂಚಿಸಿದರೂ ರಾಜ್ಯಕ್ಕೆ ಸಕಾಲದಲ್ಲಿ ರೆಮ್ಡಿಸಿವಿರ್ ಪೂರೈಸದೇ ಇರುವುದರಿಂದ ಕೋವಿಡ್ ರೋಗಿಗಳ ಚಿಕಿತ್ಸೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ, ನೋಟಿಸ್ ತಲುಪಿದ 24 ಗಂಟೆಯ ಒಳಗೆ ಬಾಕಿ ವೈಯಲ್ಸ್ಗಳನ್ನು ಪೂರೈಸಬೇಕು’ ಎಂದು ನೋಟಿಸ್ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.