
ಬೆಂಗಳೂರು: ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಬೆಂಗಳೂರಿಗೆ ಸುಮಾರು ಆರು ತಿಂಗಳ ನಂತರ ನಗರದ ಬಹುತೇಕ ಕಡೆ ಗುರುವಾರ ಸಂಜೆ, ಗುಡುಗು–ಮಿಂಚು ಸಹಿತ ಹಗುರವಾಗಿ ಮಳೆಯಾಗಿದೆ.
ಬನಶಂಕರಿ, ಹಂಪಿನಗರ, ವಿಜಯನರ, ರಾಜರಾಜೇಶ್ವರಿನಗರ ಹಾಗೂ ನಾಯಂಡಹಳ್ಳಿ ಸುತ್ತಮುತ್ತ ಉತ್ತಮ ಮಳೆಯಾಯಿತು. ನಗರದ ಬಹುತೇಕ ಪ್ರದೇಶಗಳಲ್ಲಿ ಸುಮಾರು 10 ನಿಮಿಷ ಸಾಧಾರಣ ಮಳೆಯಾಗಿದೆ.
ಈ ವರ್ಷದಲ್ಲಿ ನಗರದ ಎಲ್ಲೆಡೆಯೂ ಮಳೆಯಾಗಿರುವುದು ಇದೇ ಮೊದಲು. ಗುರುವಾರ ಬೆಳಿಗ್ಗೆಯಿಂದಲೇ ಮೋಡ ಹಾಗೂ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆಗೆ ಮೋಡ ಕವಿದು ಮಳೆಯ ವಾತಾವರಣ ಸೃಷ್ಟಿಯಾಗಿತ್ತು. ಸುಮಾರು 7.30ರ ವೇಳೆಯಲ್ಲಿ ನಗರದಲ್ಲಿ ಮಳೆಯಾಯಿತು.
ಗರುಡಾಚಾರ್ಯಪಾಳ್ಯ, ಎಚ್. ಗೊಲ್ಲಹಳ್ಳಿ, ವಿಶ್ವೇಶಪುರ, ಕಾಟನ್ಪೇಟೆ, ಸಂಪಂಗಿರಾಮನಗರ, ಪುಲಕೇಶಿನಗರ, ಹೆಬ್ಬಾಳ, ಕುಶಾಲನಗರ, ವಿದ್ಯಾರಣ್ಯಪುರ, ಜಕ್ಕೂರು, ಹೂಡಿ, ವಿಜ್ಞಾನನಗರ, ಅರೆಕೆರೆ, ಬೆಳ್ಳಂದೂರು, ಚೊಕ್ಕಸಂದ್ರಗಳಲ್ಲಿ 0.5 ಮಿ.ಮೀನಿಂದ 1.5 ಮಿ.ಮೀವರೆಗೆ ಮಳೆಯಾಗಿದೆ.
ಫೋಟೊ ಸಂಭ್ರಮ: ವರ್ಷದಲ್ಲಿ ಮೊದಲ ಬಾರಿಗೆ ನಗರಕ್ಕೆ ಮಳೆಯ ಸಿಂಚನವಾಗಿದ್ದು, ನಾಗರಿಕರು ಹರ್ಷಪಟ್ಟರು. ಸಾಮಾಜಿಕ ಜಾಲತಾಣಗಳಲ್ಲಿ ಮಳೆಯ ಚಿತ್ರ ಹಾಗೂ ಮಳೆಯಲ್ಲಿ ನಿಂತ ಚಿತ್ರಗಳನ್ನು ಹಂಚಿಕೊಂಡರು.
ಮಳೆ ಇನ್ನಷ್ಟು ಸುರಿಯಲಿ, ರಾತ್ರಿಯೆಲ್ಲ ಸುರಿಯಲಿ... ಎಂಬ ಅಭಿಲಾಷೆ ವ್ಯಕ್ತವಾಗಿತ್ತು. ಆದರೆ, ಗುಡುಗು, ಮಿಂಚಿನ ಆರ್ಭಟವಿದ್ದರೂ ಸುಮಾರು 10 ನಿಮಿಷ ಮಾತ್ರ ಮಳೆಯಾಯಿತು. ಹೀಗಾಗಿ, ‘ಕಾದ ಹೆಂಚಿನ ಮೇಲೆ ನೀರೆರಿಚಿದಂತಾಯಿತು ನಗರದ ಸ್ಥಿತಿ’ ಎಂಬ ಮಾತುಗಳೂ ಕೇಳಿಬಂದವು.
ಎಲ್ಲೆಲ್ಲಿ ಎಷ್ಟು ಮಳೆ (ಮಿಮೀ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.