ADVERTISEMENT

ಬೆಂಗಳೂರು | ತ್ರಿಫಲ ವೈವಿಧ್ಯ ಮೇಳ 31 ರಿಂದ

​ಪ್ರಜಾವಾಣಿ ವಾರ್ತೆ
Published 28 ಮೇ 2024, 16:29 IST
Last Updated 28 ಮೇ 2024, 16:29 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (ಐಐಎಚ್ಆರ್‌) ಮೇ 31ರಿಂದ ಜೂನ್‌ 2ರವರೆಗೆ ‘11ನೇ ತ್ರಿಫಲ ವೈವಿಧ್ಯ’  (ಮಾವು, ಹಲಸು ಮತ್ತು ಬಾಳೆ) ಮೇಳ ನಡೆಯಲಿದೆ.

‘ಮೇಳದಲ್ಲಿ 300 ಮಾವು, 100 ಹಲಸು ಹಾಗೂ 100 ಬಾಳೆ ತಳಿಗಳ ಹಣ್ಣುಗಳನ್ನು ಪ್ರದರ್ಶಿಸಲಾಗುತ್ತಿದೆ. ಇದರ ಜೊತೆಗೆ ಮೂರು ಫಲಗಳ ವೈವಿಧ್ಯಮಯ ಮೌಲ್ಯವರ್ಧಿತ ಉತ್ಪನ್ನಗಳು ಪ್ರದರ್ಶನದಲ್ಲಿರುತ್ತವೆ. ಹಣ್ಣಿನ ಬೆಳೆಗಳ ಕೃಷಿಯನ್ನು ಉತ್ತೇಜಿಸುವುದು ಹಾಗೂ ರೈತರ ಜೀವನಮಟ್ಟವನ್ನು ಸುಧಾರಿಸುವುದು ಈ ಮೇಳದ ಉದ್ದೇಶವಾಗಿದೆ’ ಎಂದು ಐಐಎಚ್‌ಆರ್‌ನ ನಿರ್ದೇಶಕ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ADVERTISEMENT

‘ಸ್ವ–ಸಹಾಯ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು, ರೈತರು ಮತ್ತು ವ್ಯಾಪಾರಸ್ಥರು ತಮ್ಮ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶಿಸಲಿದ್ದಾರೆ. ಈ ಬೆಳೆಗಳ ಪ್ರಚಾರಕ್ಕಾಗಿ ರೈತರು, ಸಂಸ್ಕರಣೆದಾರರು, ರಫ್ತುದಾರರು, ವ್ಯಾಪಾರಿಗಳು ಮತ್ತು ನೀತಿ ನಿರೂಪಕರಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ‘ ಎಂದು ತಿಳಿಸಿದರು.

‘ಮೇಳದಲ್ಲಿ ಶಾಲಾ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ, ಆಸಕ್ತ ವೀಕ್ಷಕರಿಗೆ ಪಾಕವಿಧಾನ ಸ್ಪರ್ಧೆ ಆಯೋಜಿಸಲಾಗಿದೆ. ಸಾಧಕ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ‘ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.