ADVERTISEMENT

ಟ್ರಂಪ್‌ ಜಗತ್ತಿಗೆ ಮತ್ತೊಂದು ವಿಕೋಪ! ದೀಪಕ್ ನಯ್ಯರ್

ರಾಜಕೀಯ ಆರ್ಥಿಕತೆ ಮತ್ತು ಬದಲಾಗುತ್ತಿರುವ ವಿಶ್ವದ ಬಗ್ಗೆ ದೀಪಕ್ ನಯ್ಯರ್ ಉಪವಾಸ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 1:26 IST
Last Updated 7 ಮಾರ್ಚ್ 2025, 1:26 IST
ಬದಲಾಗುತ್ತಿರುವ ವಿಶ್ವದ ಬಗ್ಗೆ ದೀಪಕ್‌ ನಯ್ಯರ್‌ ಉಪನ್ಯಾಸ ನೀಡಿದರು
ಪ್ರಜಾವಾಣಿ ಚಿತ್ರ
ಬದಲಾಗುತ್ತಿರುವ ವಿಶ್ವದ ಬಗ್ಗೆ ದೀಪಕ್‌ ನಯ್ಯರ್‌ ಉಪನ್ಯಾಸ ನೀಡಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತೆಗೆದುಕೊಳ್ಳುತ್ತಿರುವ ಅನಿಶ್ಚಿತ ನಿರ್ಧಾರಗಳನ್ನು ನೋಡಿದರೆ ಅವರೇ ಜಾಗತಿಕ ವಿಕೋಪವಾಗಿ ಪರಿಣಮಿಸುವ ಸಾಧ್ಯತೆ ಇದೆ’ ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ದೀಪಕ್ ನಯ್ಯರ್ ತಿಳಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಗುರುವಾರ ಅವರು ‘ರಾಜಕೀಯ ಆರ್ಥಿಕತೆ ಮತ್ತು ಬದಲಾಗುತ್ತಿರುವ ವಿಶ್ವ’ ಕುರಿತು ಉಪನ್ಯಾಸ ನೀಡಿದರು.

‘ವಿಶ್ವಸಂಸ್ಥೆಯು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ವಿಶ್ವ ವ್ಯಾಪಾರ ಸಂಘಟನೆ (ವರ್ಲ್ಡ್‌ ಟ್ರೇಡ್‌ ಆರ್ಗನೈಸೇಸನ್‌) ಕೊನೆಗೊಳ್ಳುವ ಹಂತಕ್ಕೆ ತಲುಪಿದೆ. ಜಾಗತೀಕರಣ ಅಪಾಯದಲ್ಲಿದೆ. ದೇಶಗಳ ನಡುವಿನ ರಾಜಕೀಯ ಸಂಬಂಧವು ಹದಗೆಡುತ್ತಿದೆ. ಭೌಗೋಳಿಕ ಗಡಿ ವಿವಾದಗಳು  ತೀಕ್ಷ್ಣವಾಗಿವೆ. ಅಂತರರಾಷ್ಟ್ರೀಯ ಸಂಬಂಧಗಳು ಹದಗೆಟ್ಟಿವೆ. ಇಂಥ ಸಂದರ್ಭದಲ್ಲಿ ಅಮೆರಿಕದ ಹಿತಾಸಕ್ತಿಗಾಗಿ ಯಾವುದೇ ಅನಾಹುತ ನಿರ್ಧಾರಗಳನ್ನು ಕೈಗೊಳ್ಳಲು ಹಿಂದೆ ಮುಂದೆ ನೋಡದ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿದ್ದಾರೆ’ ಎಂದು ವಿಶ್ಲೇಷಿಸಿದರು.

ADVERTISEMENT

‘ವಿಶ್ವ ಆರ್ಥಿಕತೆಗೆ ಕೊಡುಗೆಯಲ್ಲಿ 1990ರಲ್ಲಿ ಭಾರತ, ಬ್ರೆಜಿಲ್‌ಗೆ ಸರಿಸಮಾನಾಗಿ ಚೀನಾ ಇತ್ತು. 2005ರಲ್ಲಿ ಶೇ 5ರಷ್ಟು ಕೊಡುಗೆ ನೀಡಿತ್ತು. 2022ರಲ್ಲಿ ವಿಶ್ವ ಜಿಡಿಪಿಗೆ ಚೀನಾ ಕೊಡುಗೆ ಶೇ 18. ಮುಂದುವರಿಯುತ್ತಿರುವ ಎಲ್ಲ ದೇಶಗಳ ಒಟ್ಟು ಕೊಡುಗೆ ಶೇ 14. ಇದು ಚೀನಾದ ಬೆಳವಣಿಗೆಯ ದೊಡ್ಡ ಪ್ರಮಾಣವನ್ನು ಸೂಚಿಸುತ್ತಿದೆ. ಜೊತೆಗೆ ಅಮೆರಿಕದ ಪ್ರಾಬಲ್ಯವನ್ನು ಕಡಿಮೆ ಮಾಡಿದೆ’ ಎಂದು ವಿವರಿಸಿದರು.

‘ರಾಷ್ಟ್ರೀಯವಾದ ಮುನ್ನೆಲೆಗೆ ಬಂದಿದೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು ಇಸ್ರೇಲ್-ಹಮಾಸ್ ಸಂಘರ್ಷ ಸೇರಿದಂತೆ ಹಲವಾರು ನಡೆಯುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು  ಸರಕುಗಳ ಜಾಗತಿಕ ಚಲನೆಗೆ ಅಡ್ಡಿಪಡಿಸಿವೆ. ಇದರ ಬಡವರು, ಅಂಚಿನಲ್ಲಿರುವವರು ಇದರ ಪರಿಣಾಮವನ್ನು ಎದುರಿಸುವಂತಾಗಿದೆ’ ಎಂದರು. 

‘ಪಶ್ಚಿಮ ಯುರೋಪ್‌, ಜಪಾನ್‌ ಸಹಿತ ಪ್ರಮುಖ ದೇಶಗಳು ಆರ್ಥಿಕವಾಗಿ ಹಿಮ್ಮುಖವಾಗಿ ಚಲಿಸುತ್ತಿವೆ. ಇಸ್ಲಾಂ ದೇಶಗಳ ಜಾಗತೀಕರಣವು ಕೂಡ ಪಾಶ್ಚಿಮಾತ್ಯ ದೇಶಗಳ ಆರ್ಥಿಕತೆಗೆ ಸವಾಲು ಒಡ್ಡಿವೆ’ ಎಂದು ಹೇಳಿದರು.

‘ಸದೃಢ ಆರ್ಥಿಕತೆ, ಉತ್ತಮ ರಾಜಕೀಯದ ಹೊಸವಿಶ್ವವನ್ನು ಕಟ್ಟುವ ಒಂದೇ ಒಂದು ದೇಶ ಕಾಣುತ್ತಿಲ್ಲ. ಮುಂದಿನ 25 ವರ್ಷ ವಿಶ್ವದಲ್ಲಿ ಇದೇ ರೀತಿಯ ಅಸ್ಥಿರತೆ ಮುಂದುವರಿಯಲಿದೆ’ ಎಂದು ಭವಿಷ್ಯ ನುಡಿದರು.

ತಕ್ಷಶಿಲಾ ಫೌಂಡೇಶನ್ ಸಹ ಸಂಸ್ಥಾಪಕ ನಿತಿನ್ ಪೈ ಸಂವಾದ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.