ADVERTISEMENT

ಹೊಸ ವರ್ಷ: ಬೆಂಗಳೂರಿನಲ್ಲಿ ಇಂದು ರಾತ್ರಿ ಎಲ್ಲ ಮೇಲ್ಸೇತುವೆ ಬಂದ್‌

ನಗರದಾದ್ಯಂತ ಪೊಲೀಸ್ ನಾಕಾಬಂದಿ * ಸಾರ್ವಜನಿಕವಾಗಿ ಆಚರಣೆಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 2:47 IST
Last Updated 31 ಡಿಸೆಂಬರ್ 2020, 2:47 IST
ಹೊಸ ವರ್ಷಾಚರಣೆಗೆ ನಗರದ ಕಮರ್ಷಿಯಲ್‌ ಸ್ಟ್ರೀಟ್‌ ಬಣ್ಣ ಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿರುವುದು -ಪ್ರಜಾವಾಣಿ ಚಿತ್ರ/ಪುಷ್ಕರ್‌ ವಿ.
ಹೊಸ ವರ್ಷಾಚರಣೆಗೆ ನಗರದ ಕಮರ್ಷಿಯಲ್‌ ಸ್ಟ್ರೀಟ್‌ ಬಣ್ಣ ಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿರುವುದು -ಪ್ರಜಾವಾಣಿ ಚಿತ್ರ/ಪುಷ್ಕರ್‌ ವಿ.   

ಬೆಂಗಳೂರು: ‘ಹೊಸ ವರ್ಷಾಚರಣೆ ವೇಳೆ ಹೆಚ್ಚು ಜನರು ಸೇರದಂತೆ ತಡೆಯಲು ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌, ಮ್ಯೂಸಿಯಂ ರಸ್ತೆ, ರೆಸಿಡೆನ್ಸಿ ರಸ್ತೆಗಳಲ್ಲಿ ಡಿ.31ರ ರಾತ್ರಿ 8 ಗಂಟೆಯಿಂದ ಜ.1ರ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂಗಡ ಟಿಕೆಟ್ ಹಾಗೂ ಪಾಸ್‌ ಇದ್ದವರಿಗೆ ಮಾತ್ರ ರೆಸ್ಟೋರೆಂಟ್‌, ಪಬ್‌, ಪಾರ್ಟಿಗಳಿಗೆ ಅವಕಾಶ ನೀಡಲಾಗುವುದು. ನಿಷೇಧಿತ ರಸ್ತೆಗಳಲ್ಲಿ ಪೊಲೀಸ್‌ ತಪಾಸಣೆ ಇರಲಿದೆ. ಪಾರ್ಟಿಗಳಿಗೆ ಹೋಗುವವರು ವಾಹನಗಳನ್ನು ಬಿಟ್ಟು, ನಡೆದು ಹೋಗಬಹುದು. ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಇರಲಿದೆ’ ಎಂದು ವಿವರಿಸಿದರು.

‘ಹೊಸ ವರ್ಷದ ಆಚರಣೆ ವೇಳೆ ಮೋಜು ಮಾಡಲುನೈಸ್‌ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಜನ ಸೇರುತ್ತಾರೆ. ಕೆಲವರು ಬೈಕ್‌ ರೇಸ್, ವೀಲಿಂಗ್‌ ಮಾಡುತ್ತಾರೆ. ಅಂತಹವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ನೈಸ್‌ ರಸ್ತೆಯಲ್ಲೂ ಪೊಲೀಸರನ್ನು ನಿಯೋಜಿಸಲಾಗುವುದು’ ಎಂದರು.

ADVERTISEMENT

668 ಸ್ಥಳಗಳಲ್ಲಿ ಮದ್ಯ ತಪಾಸಣೆ: ‘ಮದ್ಯ ಸೇವಿಸಿ–ವಾಹನ ಚಾಲನೆ ತಪಾಸಣೆಗೆ 668 ಸ್ಥಳಗಳಲ್ಲಿ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ. ನಗರದಾದ್ಯಂತ 2,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು,191 ಕಡೆ ನಾಕಾಬಂದಿ ಹಾಕಲಾಗುವುದು. ಅನಗತ್ಯವಾಗಿ ಸಂಚರಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ವಾಹನ ಸವಾರರು ಮಾಸ್ಕ್‌, ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಹೊಸ ವರ್ಷದ ನೆಪದಲ್ಲಿ ಮದ್ಯ ಸೇವಿಸಿ, ವಾಹನ ಚಾಲನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಇರುವುದರಿಂದ ಪೊಲೀಸರು ಮದ್ಯಚಾಲನೆ ತಪಾಸಣೆ ನಡೆಸುವುದಿಲ್ಲ ಎಂದು ಭಾವಿಸಬೇಡಿ. ಮದ್ಯ ಸೇವಿಸಿರುವುದು ತಿಳಿದು ಬಂದರೆ, ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಸಾಬೀತಾದರೆ ವಾಹನ ಜಪ್ತಿ ಮಾಡಲಾಗುವುದು. ಜೊತೆಗೆ ಅಪರಾಧ ದಂಡ ಸಂಹಿತೆಯಡಿ (ಸಿಆರ್‌ಪಿಸಿ) ಪ್ರಕರಣ ದಾಖಲಿಸಿ, ಚಾಲನಾ ಪರವಾನಗಿ ರದ್ದು ಮಾಡುತ್ತೇವೆ’ ಎಂದೂ ಎಚ್ಚರಿಸಿದರು.

ಎಲ್ಲ ಮೇಲ್ಸೇತುವೆ ಬಂದ್‌: ‘ನಗರದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿರುವುದರಿಂದ ನಗರದ ಹೊರಭಾಗಗಳತ್ತ ಜನ ಹೊರಡುತ್ತಾರೆ. ಅಲ್ಲಿಯೂ ಸಂಭ್ರಮಾಚರಣೆಗೆ ತಡೆ ಇರಲಿದ್ದು, ನಗರದ ಪ್ರಮುಖ ಮೇಲ್ಸೇತುವೆಗಳು ಹಾಗೂ ಹೊರಭಾಗಗಳನ್ನು ಸಂಪರ್ಕಿಸುವ ಮೇಲ್ಸೇತುವೆಗಳನ್ನು ಗುರುವಾರ ರಾತ್ರಿ 10ರಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ ಮುಚ್ಚಲಾಗುವುದು. ಸರ್ವೀಸ್‌ ರಸ್ತೆಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ’ ಎಂದುರವಿಕಾಂತೇಗೌಡ ಮಾಹಿತಿ ನೀಡಿದರು.

ವಾಹನ ನಿಲುಗಡೆ ನಿಷೇಧ ಎಲ್ಲೆಲ್ಲಿ?: ಎಂ.ಜಿ.ರಸ್ತೆಯಿಂದ ಟ್ರಿನಿಟಿ ವೃತ್ತದವರೆಗೆ, ಕಬ್ಬನ್‌ ರಸ್ತೆ, ರೆಸಿಡೆನ್ಸಿ ರಸ್ತೆ, ರಿಚ್‌ಮಂಡ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌, ಮ್ಯೂಸಿಯಂ ರಸ್ತೆ, ಸೇಂಟ್ ಮಾರ್ಕ್‌ ರಸ್ತೆ, ಮ್ಯಾಗ್ರತ್ ರಸ್ತೆ, ಕಮಿಷನರೇಟ್ ರಸ್ತೆ, ಇಂದಿರಾನಗರ 100 ಅಡಿ ರಸ್ತೆ, ರೆಸ್ಟ್‌ ಹೌಸ್ ರಸ್ತೆ, ಡಿಸ್ಪೆನ್ಸರಿ ರಸ್ತೆ. (ಸಂಜೆ 4ರಿಂದ ಮಧ್ಯರಾತ್ರಿ 2ಗಂಟೆಯವರೆಗೆ)

*
ನಿಯಮ ಉಲ್ಲಂಘಿಸಿದವರಿಗೆ ಭಾರಿ ದಂಡದೊಂದಿಗೆ ಐಪಿಸಿ ಸೆಕ್ಷನ್ 188, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ (ಎನ್‌ಡಿಎಂಎ) ಪ್ರಕರಣ ದಾಖಲಿಸಲಾಗುವುದು.
-ಕಮಲ್ ಪಂತ್, ನಗರ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.