ಬೆಂಗಳೂರು: ಸಾರ್ವಜನಿಕ ಸ್ಥಳ ಹಾಗೂ ಮನೆ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪದಡಿ ದೀಪಕ್ ಅಲಿಯಾಸ್ ದೀಪುನನ್ನು (23) ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆರೋಪಿ ದೀಪು, ಅಪರಾಧ ಹಿನ್ನೆಲೆಯುಳ್ಳವ. ಕೆಲ ಪ್ರಕರಣಗಳಲ್ಲಿ ಜೈಲಿಗೂ ಹೋಗಿ ಜಾಮೀನು ಮೇಲೆ ಹೊರಬಂದಿದ್ದ. ಆಹಾರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಅದರ ಜೊತೆಗೆಯೇ ವಾಹನಗಳನ್ನು ಕದಿಯುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಆಹಾರ ಪೂರೈಕೆಗಾಗಿ ನಗರದ ಹಲವೆಡೆ ಸುತ್ತಾಡುತ್ತಿದ್ದ ಆರೋಪಿ, ದ್ವಿಚಕ್ರ ವಾಹನಗಳನ್ನು ಗುರುತಿಸುತ್ತಿದ್ದ. ಹ್ಯಾಂಡಲ್ ಲಾಕ್ ಮುರಿದು ವಾಹನ ಕದ್ದೊಯ್ಯುತ್ತಿದ್ದ. ನಂತರ, ತನ್ನದೇ ವಾಹನವೆಂದು ಹೇಳಿ ಬೇರೆಯವರಿಗೆ ಮಾರುತ್ತಿದ್ದ.’
‘ಜೆ.ಪಿ.ನಗರ, ಪರಪ್ಪನ ಅಗ್ರಹಾರ, ಹೆಣ್ಣೂರು ಹಾಗೂ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿದ್ದ. ಬೈಯಪ್ಪನಹಳ್ಳಿ ಬಳಿಯ ಜಿ.ಎಂ. ಪಾಳ್ಯದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಇತ್ತೀಚೆಗೆ ಕಳ್ಳತನ ಆಗಿತ್ತು. ಈ ಬಗ್ಗೆ ದಾಖಲಾದ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದ. ಈತನಿಂದ ₹ 3 ಲಕ್ಷ ಮೌಲ್ಯದ 5 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.