ಬೆಂಗಳೂರು: ಅಭಿಮಾನ್ ಸ್ಟುಡಿಯೊದ ಆವರಣದಲ್ಲಿದ್ದ ನಟ ವಿಷ್ಣುವರ್ಧನ್ ಅವರ ಸಮಾಧಿ ತೆರವು ವಿಚಾರದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಮೌನ ವಹಿಸಿರುವ ಕ್ರಮವನ್ನು ಖಂಡಿಸಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಮಾಧಿಯನ್ನು ಏಕಾಏಕಿ ತೆರವು ಮಾಡಿರುವುದು ಅಭಿಮಾನಿಗಳಿಗೆ ನೋವು ಉಂಟು ಮಾಡಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರು ಮೌನ ವಹಿಸಿರುವುದು, ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡದೇ ಇರುವುದು ಖಂಡನೀಯ ಎಂದು ವಿಷ್ಣುವರ್ಧನ್ ಅಭಿಮಾನಿ ಕ್ರಾಂತಿರಾಜು ದೂರಿದರು.
ವಿಷ್ಣುವರ್ಧನ್ ಅಭಿಮಾನಿಗಳನ್ನು ನಿರ್ಮಾಪಕ ಸಾ.ರಾ.ಗೋವಿಂದ ಅವರು ಸಮಾಧಾನ ಪಡಿಸಿದರು. ಸರ್ಕಾರದ ಜೊತೆಯಲ್ಲಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ವಿಷ್ಣುವರ್ಧನ್ ಬದುಕಿದ್ದಾಗ ನೂರಾರು ತೊಂದರೆ ಅನುಭವಿಸಿದ್ದರು. ಅವರು ಮೃತಪಟ್ಟ ಮೇಲೂ ಸಮಾಧಿ ತೆರವು ಮಾಡಿ ಅಭಿಮಾನಿಗಳಿಗೆ ನೋವು ಮಾಡಿದ್ದಾರೆ ಎಂದು ವೆಂಕಟೇಶ್ಗೌಡ, ಶ್ರೀನಿವಾಸ್ ಗೌಡ ಹೇಳಿದರು.
ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಸರ್ಕಾರ ವಶಪಡಿಸಿಕೊಂಡು, ಬಾಲಕೃಷ್ಣ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಇನ್ನೂ ಕಾಲ ಮಿಂಚಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.