ADVERTISEMENT

ಕೆ.ಆರ್.ಪುರ: ಬೀದಿ ಬದಿಗಳಲ್ಲಿ ತ್ಯಾಜ್ಯದ ರಾಶಿ.. ಸಾರ್ವಜನಿಕರಿಗೆ ಕಿರಿಕಿರಿ

ಬಿದರಹಳ್ಳಿ, ಹಿರಂಡಹಳ್ಳಿಯಲ್ಲಿ ಮೂಗು ಮುಚ್ಚಿ ಓಡಾಡು ಸ್ಥಿತಿ

ಶಿವರಾಜು ಮೌರ್ಯ
Published 19 ಆಗಸ್ಟ್ 2025, 0:32 IST
Last Updated 19 ಆಗಸ್ಟ್ 2025, 0:32 IST
ಬಿದರಹಳ್ಳಿಯಿಂದ ಕಿತ್ತಗನೂರು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಬದಿಯಲ್ಲಿ ತ್ಯಾಜ್ಯ ಬಿಸಾಡಿರುವುದು
ಬಿದರಹಳ್ಳಿಯಿಂದ ಕಿತ್ತಗನೂರು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಬದಿಯಲ್ಲಿ ತ್ಯಾಜ್ಯ ಬಿಸಾಡಿರುವುದು   

ಕೆ.ಆರ್.ಪುರ: ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ರಸ್ತೆಗಳು, ಬೀದಿ ಬದಿಗಳಲ್ಲಿ ಕಸ ಸುರಿಯುತ್ತಿರುವ ಕಾರಣ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ರಸ್ತೆಯಲ್ಲಿ ಸಂಚರಿಸುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. 

ತ್ಯಾಜ ನಿರ್ವಹಣೆ ಸಮರ್ಪಕವಾಗಿ ಮಾಡದ ಬಿದರಹಳ್ಳಿ ಗ್ರಾಮ ಪಂಚಾಯಿತಿ ವಿರುದ್ಧ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬಿದರಹಳ್ಳಿಯಿಂದ ಕಿತ್ತಗನೂರು ಹಾಗೂ ರಾಂಪುರ ಸಂಪರ್ಕ ಮುಖ್ಯರಸ್ತೆಗಳು, ಅಂಗಡಿಗಳ ಹಸಿ ಮತ್ತು ಒಣ ತ್ಯಾಜ್ಯ, ನಿರ್ಮಾಣ ಹಂತದ ಕಟ್ಟಡಗಳ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಸರಿಯಾದ ರೀತಿಯಲ್ಲಿ ಪಂಚಾಯಿತಿ ಕಸ ನಿರ್ವಹಣೆ ಮಾಡುತ್ತಿಲ್ಲ. ಬಿದರಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಸ ಬಡಾವಣೆಗಳು ತಲೆ ಎತ್ತಿದ್ದು, ಕಸದ ಸಮಸ್ಯೆ ಹೆಚ್ಚಾಗಿದೆ’ ಎಂದು ಸ್ಥಳೀಯರು ದೂರಿದರು.

ADVERTISEMENT

‘ಮಾಂಸದ ಅಂಗಡಿಗಳ ಮಾಲೀಕರು ಕೋಳಿ, ಕುರಿ ಮಾಂಸದ ತ್ಯಾಜ್ಯವನ್ನು ಯಾರೂ ಇಲ್ಲದ ವೇಳೆ ಖಾಲಿ ಜಾಗ, ರಸ್ತೆ ಬದಿ ಸುರಿದು ಹೋಗುತ್ತಾರೆ. ವ್ಯಾಪಕವಾಗಿ ಕಸದ ತ್ಯಾಜ್ಯ ಸಂಗ್ರಹಗೊಂಡು ದುರ್ವಾಸನೆ ಬರುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಅಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ’ ಎಂದು ಬಿದರಹಳ್ಳಿ ನಿವಾಸಿ ರಮೇಶ್ ದೂರಿದರು.

‘ಮುಖ್ಯ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನ ಸಂಚರಿಸುತ್ತವೆ. ಶಾಲೆ, ಕಾಲೇಜುಗಳಿಗೆ ಇದೇ ರಸ್ತೆಯಲ್ಲಿ ಸಾಗಬೇಕು. ತ್ಯಾಜ್ಯಕ್ಕೆ ಬೆಂಕಿ ಹಾಕಲಾಗುತ್ತದೆ. ದಟ್ಟವಾದ ಹೊಗೆ ಆವರಿಸಿ, ಕಲುಷಿತ ಗಾಳಿ ಸೇವಿಸುವಂತಾಗಿದೆ’ ಎಂದು ಹೇಳಿದರು.

‘ಕಸ ಸುರಿಯದಂತೆ ಫಲಕಗಳನ್ನು ಹಾಕಲಾಗಿದೆ. ಆದರೆ, ತ್ಯಾಜ್ಯ ಬಿಸಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ  ಯಾವುದೇ ಭಯವಿಲ್ಲದೆ ಕಸವನ್ನು ರಸ್ತೆ ಬದಿಗಳಲ್ಲಿ ಸುರಿಯುತ್ತಾರೆ’ ಎಂದು ಬಿದರಹಳ್ಳಿ ನಿವಾಸಿ ದಿಲೀಪ್ ಆರೋಪಿಸಿದರು. 

‘ಹಿರಂಡಹಳ್ಳಿಯಲ್ಲೂ ಕಸದ ಸಮಸ್ಯೆ ವ್ಯಾಪಕವಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದರಿಂದ ಬೀಡಾಡಿ ನಾಯಿಗಳು ಆಹಾರ ಹುಡುಕಿಕೊಂಡು ರಸ್ತೆಗೆ ಬರುತ್ತವೆ. ಇದರಿಂದ ವಾಹನ ಸವಾರರಿಗೆ ತೊಂದರೆ ಊಂಟಾಗಿದ್ದು, ನಾಯಿಗಳಿಗೆ ಡಿಕ್ಕಿ ತಪ್ಪಿಸಲು ಹೋಗಿ  ಅಪಘಾತಗಳು ಆಗಿವೆ’ ಎಂದು ದಲಿತ ಮುಖಂಡ ಅದೂರು ಮಂಜುನಾಥ್ ಹೇಳಿದರು.

‘ರಸ್ತೆ ಬದಿಯ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ರಸ್ತೆಯ ಅಕ್ಕಪಕ್ಕ ಬೆಳೆದಿರುವ ಹುಲ್ಲು ತೆರವು ಮಾಡಿಲ್ಲ. ವಿಷ ಜಂತುಗಳ ವಾಸಸ್ಥಾನವಾಗಿದೆ’  ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಕಾರ್ಮಿಕ ಘಟಕದ ಅಧ್ಯಕ್ಷ ಕಾವೇರಪ್ಪ ಹೇಳಿದರು.

ಬಿದರಹಳ್ಳಿ ರಾಂಪುರ ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.