ADVERTISEMENT

ಪತಿಯನ್ನು ಕೊಂದು ನಾಟಕ: ಮಂಡ್ಯದಲ್ಲಿ ಸಿಕ್ಕಿಬಿದ್ದ ಪತ್ನಿ

ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ l ಗಾಯ ನೀಡಿದ ಸುಳಿವು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 22:04 IST
Last Updated 4 ಸೆಪ್ಟೆಂಬರ್ 2022, 22:04 IST
ಮಹೇಶ್ , ಶಿಲ್ಪಾ
ಮಹೇಶ್ , ಶಿಲ್ಪಾ    

ಬೆಂಗಳೂರು: ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ಮಹೇಶ್ (33) ಎಂಬುವರನ್ನು ಕೊಲೆ ಮಾಡಲಾಗಿದ್ದು, ಆರೋಪಿ ಎನ್ನಲಾದ ಪತ್ನಿ ಶಿಲ್ಪಾ (26) ಅವರನ್ನು ಮಂಡ್ಯದಲ್ಲಿ ಪೊಲೀಸರು ಬಂಧಿಸಿದ್ದಾರೆ.

‘ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಪೂರಿಗಾಲಿಯ ಮಹೇಶ್, ಬೆಂಗಳೂರಿನ ಕೊಕೊನಟ್ ಗಾರ್ಡನ್‌ ನಲ್ಲಿ ವಾಸವಿದ್ದರು. ಅವರನ್ನು ಸೆ. 1ರಂದು ಕೊಲೆ ಮಾಡಿದ್ದ ಶಿಲ್ಪಾ, ಅಸಹಜ ಸಾವೆಂದು ಹೇಳಿ ನಾಟಕವಾಡಿದ್ದಳು. ಮಹೇಶ್ ಅವರ ಸಹೋದರ ನೀಡಿದ್ದ ದೂರು ಆಧರಿಸಿ, ಶಿಲ್ಪಾ ಹಾಗೂ ಕೃತ್ಯಕ್ಕೆ ಸಹಾಯ ಮಾಡಿದ್ದ ಆರೋಪಿ ಕೆಂಪದೇವಮ್ಮ ಎಂಬುವರನ್ನು ಬಂಧಿಸ ಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಎಂಟು ವರ್ಷದ ಹಿಂದೆ ಮದುವೆ: ‘ಕೃಷಿಕ ಕುಟುಂಬದ ಮಹೇಶ್, ಶಿಲ್ಪಾ ಅವರನ್ನು ಎಂಟು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ 6 ವರ್ಷದ ಗಂಡು ಮಗುವಿದೆ. ಶಿಲ್ಪಾ ಅವರ ತಂದೆ–ತಾಯಿ ಬೆಂಗಳೂರಿನ ಗೌಡನಪಾಳ್ಯದಲ್ಲಿ ನೆಲೆಸಿದ್ದರು. ಮಹೇಶ್‌–ಶಿಲ್ಪಾ
ಸಹ ಮೂರು ತಿಂಗಳ ಹಿಂದೆ ಯಷ್ಟೇ ಬೆಂಗಳೂರಿಗೆ ಬಂದು ಕೊಕೊನಟ್ ಗಾರ್ಡನ್‌ ಪ್ರದೇಶ ದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅಪಾರ್ಟ್‌ ಮೆಂಟ್ ಸಮುಚ್ಚಯ ವೊಂದರಲ್ಲಿ ದಂಪತಿ ಒಟ್ಟಿಗೆ ಕೆಲಸಕ್ಕೆ ಸೇರಿದ್ದರು’ ಎಂದು ಪೊಲೀಸ್ ಮೂಲಗಳು
ತಿಳಿಸಿವೆ

ADVERTISEMENT

‘ಮದ್ಯವ್ಯಸನಿ ಆಗಿದ್ದ ಮಹೇಶ್, ನಿತ್ಯವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದನೆಂದು ಗೊತ್ತಾಗಿದೆ. ಶೀಲ ಶಂಕಿಸಿ ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತ ಶಿಲ್ಪಾ, ಪತಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದರೆಂದು ಹೇಳಲಾಗಿದೆ’ ಎಂದೂ ತಿಳಿಸಿವೆ.

ಹಲ್ಲೆ ಮಾಡಿ ಕೊಲೆ: ‘ಸೆ. 1ರಂದು ಮಹೇಶ್ ಮದ್ಯ ಕುಡಿದು ಮನೆಗೆ ಬಂದಿದ್ದರು. ಅವರಿಗೆ ಶಿಲ್ಪಾ, ಕೆಂಪದೇವಮ್ಮ ಹಾಗೂ ಇತರರು ತೀವ್ರವಾಗಿ ಹೊಡೆದಿದ್ದರು. ತೀವ್ರ ಗಾಯದಿಂದ ಮಹೇಶ್ ಮೃತಪಟ್ಟಿದ್ದರೆಂಬ ಮಾಹಿತಿ ಲಭ್ಯ ವಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಂಡ್ಯದಲ್ಲಿರುವ ಮಹೇಶ್ ಸಂಬಂಧಿಕರಿಗೆ ಕರೆ ಮಾಡಿದ್ದ ಶಿಲ್ಪಾ, ಬೆಂಗಳೂರಿನಲ್ಲಿ ವಿಪರೀತ ಮಳೆ. ಮದ್ಯ ಕುಡಿದು ಬರುವಾಗ ಪತಿ, ನೀರಿನಲ್ಲಿ ನೆನೆದಿದ್ದಾರೆ. ಅನಾರೋಗ್ಯ ಸಮಸ್ಯೆ ಉಂಟಾಗಿ, ಮೂರ್ಛೆ ಬಂದು ಬಿದ್ದು ಮೃತಪಟ್ಟಿದ್ದಾರೆ’ ಎಂದಿದ್ದರು. ಬಳಿಕ, ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಮಂಡ್ಯಕ್ಕೆ ತೆಗೆದುಕೊಂಡು ಹೋಗಿದ್ದರು’ ಎಂದೂ
ತಿಳಿಸಿವೆ.

ಗಾಯ ನೀಡಿದ ಕೊಲೆ ಸುಳಿವು: ‘ಸೆ. 1ರಂದು ರಾತ್ರಿ ಮೃತದೇಹ ಮಂಡ್ಯ ತಲುಪಿತ್ತು. ಕೊಲೆ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಸೆ. 2ರಂದು ಬೆಳಿಗ್ಗೆ ಮೃತದೇಹ ಮೇಲಿನ ಬಟ್ಟೆ ಬಿಚ್ಚಿದ್ದ ಕುಟುಂಬಸ್ಥರಿಗೆ, ಕೈ–ಕಾಲು, ಸೊಂಟ ಹಾಗೂ ಇತರೆ ರಕ್ತ ಹೆಪ್ಪುಗಟ್ಟಿದ ಗಾಯದ ಗುರುತುಗಳು ಕಂಡಿದ್ದವು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕುಟುಂಬಸ್ಥರೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿದ್ದ ಪೊಲೀಸರು ಶವವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಮಂಡ್ಯಕ್ಕೆ ಹೋದ ವಿಶೇಷ ತಂಡ, ಆರೋಪಿ ಶಿಲ್ಪಾ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದೆ. ಶೀಲ ಶಂಕಿಸುತ್ತಿದ್ದ ಪತಿ, ಪದೇ ಪದೇ ಜಗಳ ಮಾಡುತ್ತಿದ್ದ. ದೈಹಿಕ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಕೊಲೆ ಮಾಡಿರುವುದಾಗಿ ಶಿಲ್ಪಾ ಹೇಳುತ್ತಿದ್ದಾರೆ. ಕೊಲೆ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.