ADVERTISEMENT

ಕಬ್ಬನ್:ಸಿಪಿಆರ್ ಯೋಜನೆಯಡಿ ಜಲ ಸಂರಕ್ಷಣೆ

ಮಳೆ ನೀರು ಸಂಗ್ರಹಕ್ಕೆ ಇಂಗು ಗುಂಡಿ ನಿರ್ಮಾಣ, ಬಾವಿಗಳ ಪುನಶ್ಚೇತನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 20:38 IST
Last Updated 22 ಮಾರ್ಚ್ 2021, 20:38 IST
ಮಳೆ ನೀರು ಸಂಗ್ರಹಕ್ಕಾಗಿ ಕಬ್ಬನ್ ಉದ್ಯಾನದಲ್ಲಿ ನಿರ್ಮಿಸಿರುವ ಇಂಗು ಗುಂಡಿಯನ್ನು ಸಚಿವ ಆರ್.ಶಂಕರ್ ವೀಕ್ಷಿಸಿದರು.ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನಿರ್ದೇಶಕಿ ಫೌಜಿಯಾ ತರನುಮ್, ಜಂಟಿ ನಿರ್ದೇಶಕ ಎಂ.ಜಗದೀಶ್, ಉಪನಿರ್ದೇಶಕರಾದ ಜಿ.ಕುಸುಮಾ, ಬಾಲಕೃಷ್ಣ ಹಾಗೂ ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ
ಮಳೆ ನೀರು ಸಂಗ್ರಹಕ್ಕಾಗಿ ಕಬ್ಬನ್ ಉದ್ಯಾನದಲ್ಲಿ ನಿರ್ಮಿಸಿರುವ ಇಂಗು ಗುಂಡಿಯನ್ನು ಸಚಿವ ಆರ್.ಶಂಕರ್ ವೀಕ್ಷಿಸಿದರು.ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನಿರ್ದೇಶಕಿ ಫೌಜಿಯಾ ತರನುಮ್, ಜಂಟಿ ನಿರ್ದೇಶಕ ಎಂ.ಜಗದೀಶ್, ಉಪನಿರ್ದೇಶಕರಾದ ಜಿ.ಕುಸುಮಾ, ಬಾಲಕೃಷ್ಣ ಹಾಗೂ ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜಲ ಸಂರಕ್ಷಣೆ ಉದ್ದೇಶದಿಂದಕಬ್ಬನ್ ಉದ್ಯಾನದಲ್ಲಿ ಕೈಗೆತ್ತಿಕೊಂಡಿದ್ದ ‘ಕಬ್ಬನ್‌ ಪಾರ್ಕ್‌ ಪುನಶ್ಚೇತನ ಯೋಜನೆ’ (ಸಿಪಿಆರ್) ಪೂರ್ಣಗೊಂಡಿದ್ದು, ವಿಶ್ವ ಜಲ ದಿನದ ಅಂಗವಾಗಿ ಯೋಜನೆಯ ಕಾರ್ಯಗಳನ್ನು ಸೋಮವಾರ ಪರಿಚಯಿಸಲಾಯಿತು.

ಸಿಪಿಆರ್ ಯೋಜನೆಯಡಿ ಕಬ್ಬನ್‌ ಉದ್ಯಾನದಲ್ಲಿದ್ದ ಆರು ಬಾವಿಗಳ ಅಭಿವೃದ್ಧಿ, ದುರಸ್ತಿ ಹಾಗೂ ಮಳೆ ನೀರು ಸಂಗ್ರಹಕ್ಕಾಗಿ 73 ಇಂಗು ಗುಂಡಿಗಳನ್ನು ನಿರ್ಮಿಸುವ ಯೋಜನೆಯನ್ನು ಎರಡು ಹಂತಗಳಲ್ಲಿ 2017ರಿಂದ ಕೈಗೆತ್ತಿಕೊಳ್ಳಲಾಗಿತ್ತು. ಕಳೆದ ವರ್ಷವೇ ಯೋಜನೆ ಪೂರ್ಣಗೊಂಡಿದ್ದು, ಕೋವಿಡ್‌ ಸ್ಥಿತಿಯಿಂದ ಉದ್ಘಾಟನೆ ಸಾಧ್ಯವಾಗಿರಲಿಲ್ಲ.

ತೋಟಗಾರಿಕೆ ಇಲಾಖೆಯ ಆಶ್ರಯದಲ್ಲಿ ಬಯೋಮಿ ಎನ್ವಿರಾನ್‌ಮೆಂಟಲ್ ಟ್ರಸ್ಟ್, ಫ್ರೆಂಡ್ಸ್‌ ಆಫ್ ಲೇಕ್ಸ್‌ ಹಾಗೂ ಇಂಡಿಯಾ ಕೇರ್ ಫೌಂಡೇಷನ್‌ ಸಂಸ್ಥೆಗಳು ಈ ಯೋಜನೆಗೆ ಕೈಜೋಡಿಸಿದ್ದವು.

ADVERTISEMENT

ಯೋಜನೆಯ ಕಾರ್ಯಕ್ರಗಳನ್ನು ಪರಿಶೀಲಿಸಿ ಮಾತನಾಡಿದ ತೋಟಗಾರಿಕೆ ಸಚಿವ ಆರ್.ಶಂಕರ್,‘ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಜಲ ದಿನದ ಅಂಗವಾಗಿ ಮಳೆ ನೀರು ಹಿಡಿದಿಟ್ಟುಕೊಳ್ಳುವ ಅಭಿಯಾನವನ್ನು ಘೋಷಿಸಿದ್ದಾರೆ. ಉದ್ಯಾನದಲ್ಲಿ ಮಳೆ ನೀರು ಸಂಗ್ರಹಕ್ಕಾಗಿ ಸಿಪಿಆರ್ ಯೋಜನೆಯ ಕಾರ್ಯಗಳು ಶ್ಲಾಘನೀಯ’ ಎಂದರು.

‘ಉದ್ಯಾನದಲ್ಲಿ ಸಾಂಪ್ರದಾಯಿಕ ತೆರೆದ ಬಾವಿಗಳು ಮತ್ತು ಮಳೆನೀರು ಸಂಗ್ರಹ ಗುಂಡಿಗಳನ್ನು ನಿರ್ಮಿಸಿರುವುದು ಸಂತೋಷಕರ ಸಂಗತಿ. ಇವುಗಳಿಂದ ಉದ್ಯಾನಕ್ಕೆ ಅಗತ್ಯವಾದ ನೀರು ಲಭ್ಯವಾಗಲಿದೆ. ಮಳೆ ನೀರು ಸಂರಕ್ಷಣೆಗೆ ಇಂತಹ ಹೆಚ್ಚಿನ ಯೋಜನೆಗಳಿಗೆ ಇಲಾಖೆ ಕೈಜೋಡಿಸಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.