ADVERTISEMENT

ಮದುವೆ ಆಮಿಷ: ಸಿಕ್ಕಿಬಿದ್ದ ‘ಆನ್‌ಲೈನ್ ವರ’

ವಿಧವೆಯರು, ವಿಚ್ಛೇದಿತ ಮಹಿಳೆಯರಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 22:31 IST
Last Updated 14 ಮಾರ್ಚ್ 2020, 22:31 IST
ಮಂಜುನಾಥ್
ಮಂಜುನಾಥ್   

ಬೆಂಗಳೂರು: ವೈವಾಹಿಕ ಜಾಲತಾಣ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಮದುವೆ ಆಮಿಷವೊಡ್ಡಿ ವಂಚಿಸುತ್ತಿದ್ದ ಆರೋಪದಡಿ ಮಂಜುನಾಥ್ (34) ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

‘ರಾಮನಗರ ಜಿಲ್ಲೆಯ ಮಾಯಗಾನಹಳ್ಳಿಯ ಮಂಜುನಾಥ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ.ಕಾಮಾಕ್ಷಿಪಾಳ್ಯದ ವೃಷಭಾವತಿನಗರದಲ್ಲಿ ನೆಲೆಸಿದ್ದ. ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ನಿರುದ್ಯೋಗಿಯಾಗಿದ್ದರೂ ತಾನೊಬ್ಬ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯೆಂದು ಸುಳ್ಳು ಹೇಳಿಕೊಂಡು ವೈವಾಹಿಕ ಜಾಲತಾಣದಲ್ಲಿ ಪ್ರೊಫೈಲ್ ತೆರೆದಿದ್ದ. ಅದನ್ನು ನಂಬಿದ್ದ ವೈದ್ಯೆಯೊಬ್ಬರು ಆತನನ್ನು ಸಂಪರ್ಕಿಸಿ ವಂಚನೆಗೀಡಾಗಿದ್ದಾರೆ.’

ADVERTISEMENT

‘ವೈದ್ಯೆ ನೀಡಿದ್ದ ದೂರು ಆಧರಿಸಿಯೇ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ ಮತ್ತಷ್ಟು ಮಹಿಳೆಯರಿಗೆ ವಂಚನೆ ಆಗಿರುವ ಮಾಹಿತಿ ಇದೆ’ ಎಂದು ತಿಳಿಸಿದರು.

ಹಣ, ಮೊಬೈಲ್ ಪಡೆದಿದ್ದ: ‘ಮ್ಯಾಟ್ರಿಮೋನಿ ಡಾಟ್ ಕಾಮ್‌ ಜಾಲತಾಣದಲ್ಲಿ ಖಾತೆ ತೆರೆದಿದ್ದ ಆರೋಪಿ, ‘ಮದುವೆಯಾಗಲು ಹೆಣ್ಣು ಬೇಕು. ವಿಧವೆ ಹಾಗೂ ವಿಚ್ಛೇದಿತೆ ಆದರೂ ಪರವಾಗಿಲ್ಲ’ ಎಂದು ಬರೆದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯೆ ಆರೋಪಿಯನ್ನು ಸಂಪರ್ಕಿಸಿದ್ದರು. ನಂತರ, ಇಬ್ಬರೂ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದರು. ಮದುವೆ ಆಗುವುದಾಗಿ ಆರೋಪಿ ಒಪ್ಪಿಕೊಂಡಿದ್ದರಿಂದಸಲುಗೆಯೂ ಬೆಳೆದಿತ್ತು.’

‘ಆರೋಪಿ ತನ್ನನ್ನೇ ಮದುವೆ ಆಗುತ್ತಾನೆಂದು ತಿಳಿದ ವೈದ್ಯೆ, ₹5 ಲಕ್ಷ ಹಣ ಹಾಗೂ ಬೆಲೆಬಾಳುವ ಮೊಬೈಲ್‌ ನೀಡಿದ್ದರು. ಇತ್ತೀಚೆಗೆ ಆರೋಪಿಯ ನೈಜಬಣ್ಣ ಬಯಲಾಗಿತ್ತು. ಬಳಿಕ ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.