ಬೆಂಗಳೂರು: ‘ಹುಬ್ಬಳ್ಳಿಯಲ್ಲಿ ಯುವತಿಯನ್ನು ಅಮಾನುಷವಾಗಿ ಕೊಲೆ ಮಾಡಿದ ಪ್ರಕರಣವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ.
ಅಪರಾಧಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರಾದರೂ ತಕ್ಷಣವೇ ಕಾನೂನಿನ ಪ್ರಕ್ರಿಯೆ ನಡೆದು ಕೊಲೆಗಡುಕನನ್ನು ಉಗ್ರವಾದ ಶಿಕ್ಷೆಗೆ ಒಳಪಡಿಸಬೇಕು. ಇಂಥ ಬರ್ಬರ ಘಟನೆಗಳು ನಡೆದಾಗ ಶಿಕ್ಷೆ ನೀಡುವಲ್ಲಿ ವಿಳಂಬ ಮಾಡಬಾರದು ಎಂದು ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಪ್ರಧಾನ ಕಾರ್ಯದರ್ಶಿ ದೇವಿ ಆಗ್ರಹಿಸಿದ್ದಾರೆ.
‘ಯುವಕ ಮತ್ತು ಯುವತಿ ಪರಸ್ಪರ ಪರಿಚಿತರು ಎಂದು ವರದಿ ಇದೆ. ವಿವಾಹವಾಗಲು ನಿರಾಕರಿಸಿದಳೆಂದು ಕೊಲೆಯಾಗಿದೆ ಎನ್ನಲಾಗಿದೆ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಪುರುಷ ಪ್ರಧಾನ ಪಾಳೆಯಗಾರಿ ಮನೋಭಾವ ಈ ಘಟನೆಯಲ್ಲಿ ಕಣ್ಣಿಗೆ ರಾಚುತ್ತಿದೆ. ಮಹಿಳೆಯೊಬ್ಬಳ ಆಯ್ಕೆ ಸ್ವಾತಂತ್ರ್ಯ ಅಥವಾ ನಿರಾಕರಣೆಯ ಸ್ವಾತಂತ್ರ್ಯವನ್ನು ಒಪ್ಪದ ಈ ತೆರನ ದಾರ್ಷ್ಟ್ಯ ಎಲ್ಲೆಲ್ಲೂ ಕಾಣಸಿಗುತ್ತವೆ. ಇದನ್ನು ಹೀನ ಅಪರಾಧವನ್ನಾಗಿ ಪರಿಗಣಿಸಬೇಕು. ಮತ್ತು ಅಪರಾದಕ್ಕೆ ತಕ್ಕ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.
ಇಂಥ ಘಟನೆಗಳಿಗೆ ಧರ್ಮ ಜಾತಿಗಳ ಬಣ್ಣ ಬಳಿದು ರಾಜಕಾರಣಿಗಳು ದುರ್ಬಳಕೆ ಮಾಡಿಕೊಳ್ಳಬಾರದು. ಅಪರಾಧಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.