ADVERTISEMENT

ಭಾರತ ಜೋಡೋ ಪಾದಯಾತ್ರೆ: ರಾಯಚೂರಿಗೆ 2 ಸಾವಿರ ಕಾಂಗ್ರೆಸ್ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 15:31 IST
Last Updated 22 ಸೆಪ್ಟೆಂಬರ್ 2022, 15:31 IST
ಭಾರತ ಜೋಡೋ ಪಾದಯಾತ್ರೆ ಪ್ರಯುಕ್ತ ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ ಮಾತನಾಡಿದರು
ಭಾರತ ಜೋಡೋ ಪಾದಯಾತ್ರೆ ಪ್ರಯುಕ್ತ ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ ಮಾತನಾಡಿದರು   

ಜನವಾಡ: ಅಕ್ಟೋಬರ್ 21 ರಂದು ಭಾರತ ಜೋಡೋ ಪಾದಯಾತ್ರೆ ತಲುಪಲಿರುವ ರಾಯಚೂರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ 2 ಸಾವಿರ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ.

ಭಾರತ ಜೋಡೋ ಯಾತ್ರೆ ಪ್ರಯುಕ್ತ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯೂ ಆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ ಅವರ ನೇತೃತ್ವದಲ್ಲಿ ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ನಡೆದ ಪೂರ್ವ ಭಾವಿ ಸಿದ್ಧತಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ 3,600 ಕಿ.ಮೀ. ನಡೆಸಲಿರುವ ಭಾರತ ಜೋಡೋ ಪಾದಯಾತ್ರೆ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಮೀನಾಕ್ಷಿ ಸಂಗ್ರಾಮ ಹೇಳಿದರು.

ರಾಜ್ಯದಲ್ಲಿ ಬಜೆಪಿ ಸರ್ಕಾರ ಬಂದಾಗಿನಿಂದ ಯುವಕರು, ಕೂಲಿ ಕಾರ್ಮಿಕರು, ಜನಸಾಮಾನ್ಯರು ತೊಂದರೆಯಲ್ಲಿದ್ದಾರೆ. ಜನಸಾಮಾನ್ಯರ ರಕ್ಷಣೆ ಮಾಡಬೇಕಾದ ಸರ್ಕಾರ ತೆರಿಗೆಗಳ ಮೂಲಕ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದರು.

ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಜನ ಮಾಜಿ ಶಾಸಕ ಅಶೋಕ ಖೇಣಿ ಅವರನ್ನು ಗೆಲ್ಲಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಸಂಯೋಜಕ ಶರಣು ಪಾಟೀಲ, ಮುಖಂಡ ಅಮೃತರಾವ್ ಚಿಮಕೋಡೆ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಚನಶೆಟ್ಟಿ, ಕರೀಂಸಾಬ್ ಕಮಠಾಣ, ಮುಖಂಡರಾದ ಗೋವರ್ಧನ್ ರಾಠೋಡ್, ರಮೇಶ ಕಮಠಾಣ, ಉದಯಕುಮಾರ ಮಲಶೆಟ್ಟಿ, ಅಜ್ಮತ್ ಅಲ್ಲೂರಿ, ಖಾಲೇದ್ ಖಮರ್, ನಾಗೇಶ ಬಿರಾದಾರ, ಬಾಬುರಾವ್, ಪ್ರಶಾಂತ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.