ADVERTISEMENT

ಅಮರ ಖಂಡ್ರೆ ಪೆನಲ್‌ಗೆ ಭರ್ಜರಿ ಗೆಲುವು

ಎಂಜಿಎಸ್ಎಸ್‌ಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳಿಗೆ ಸೋಲು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 7:42 IST
Last Updated 8 ಅಕ್ಟೋಬರ್ 2025, 7:42 IST
ಭಾಲ್ಕಿ ತಾಲ್ಲೂಕಿನ ಹುಣಜಿ (ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಮರಕುಮಾರ ಖಂಡ್ರೆ ಅವರನ್ನು ಕಾರ್ಖಾನೆ ಸಿಬ್ಬಂದಿ ಸನ್ಮಾನಿಸಿದರು
ಭಾಲ್ಕಿ ತಾಲ್ಲೂಕಿನ ಹುಣಜಿ (ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಮರಕುಮಾರ ಖಂಡ್ರೆ ಅವರನ್ನು ಕಾರ್ಖಾನೆ ಸಿಬ್ಬಂದಿ ಸನ್ಮಾನಿಸಿದರು   

ಭಾಲ್ಕಿ: ತಾಲ್ಲೂಕಿನ ಹುಣಜಿ(ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬೀದರ್ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಅಮರಕುಮಾರ ಖಂಡ್ರೆ ನೇತೃತ್ವ ದ ಪೆನಲ್‌ಗೆ ಭಾರಿ ಗೆಲುವು ದೊರೆತಿದೆ. ಬಿಜೆಪಿ ಅಭ್ಯರ್ಥಿಗಳು ಸೋಲು ಅನುಭವಿಸಿದರು.

ಕಾರ್ಖಾನೆಯ ಒಟ್ಟು 13 ನಿರ್ದೇಶಕರ ಸ್ಥಾನಗಳಲ್ಲಿ 8 ಸ್ಥಾನಗಳಿಗೆ ಸೋಮವಾರ ಕಾರ್ಖಾನೆ ಆವರಣದಲ್ಲಿ ಚುನಾವಣೆ ನಡೆದಿತ್ತು. 5 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದವು. ಚುನಾವಣೆ ನಂತರ ರಾತ್ರಿ 11 ಗಂಟೆ ಸುಮಾರಿಗೆ ಫಲಿತಾಂಶ ಹೊರಬಿದ್ದಿದ್ದು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರಕುಮಾರ ಖಂಡ್ರೆ ನೇತೃತ್ವದ ಪೆನಲ್ ಎಲ್ಲ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಹೀಗಾಗಿ ಚುನಾವಣಾ ಕಣ ಕುತೂಹಲ ಮೂಡಿಸಿತ್ತು. ಒಟ್ಟು 4452 ರೈತ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಆದರೆ ಬಿಜೆಪಿ ಒಬ್ಬ ಅಭ್ಯರ್ಥಿ ಕೂಡ 400 ಮತಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ ನಿರೀಕ್ಷೆಯಂತೆ ಅಮರಕುಮಾರ ಖಂಡ್ರೆ ನೇತೃತ್ವದ ಪೆನಲ್‌ನ 5 ಅವಿರೋಧ ಆಯ್ಕೆ ಸೇರಿದಂತೆ ಎಲ್ಲ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದರು.

ಗೆಲುವು ಸಾಧಿಸಿದವರ ವಿವರ: ಸಾಮಾನ್ಯ ಕ್ಷೇತ್ರದಿಂದ 5, ಸಾಮಾನ್ಯ ಮಹಿಳಾ ಕ್ಷೇತ್ರದಿಂದ 2 ಮತ್ತು ಪರಿಶಿಷ್ಟ ಜಾತಿ 1 ಸ್ಥಾನಕ್ಕೆ ಚುನಾವಣೆ ನಡೆಯಿತು.

ADVERTISEMENT

ಸಾಮಾನ್ಯ ಕ್ಷೇತ್ರದಿಂದ ಅಮರಕುಮಾರ ಖಂಡ್ರೆ 2,643, ಅಂಕುಶ ತುಳಿಸಿರಾಮ ಪಾಟೀಲ 2,538, ಮಲ್ಲಿಕಾರ್ಜುನ ಪಾಟೀಲ ಮುಗನೂರ 2,522, ಸಂತೋಷಕುಮಾರ ವೈಜಿನಾಥರಾವ್ ಪಾಟೀಲ 2,352 ಮತ್ತು ಸಂದೀಪ ಮಾನೆ 2,419 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಸಾಮಾನ್ಯ ಮಹಿಳಾ ಕ್ಷೇತ್ರದಿಂದ ನಳಿನಿ ಪಾಟೀಲ 2,446, ಸುರೇಖಾ ಶೆಟಕಾರ್ 2,352 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪರಿಶಿಷ್ಟ ಜಾತಿ ಕ್ಷೇತ್ರದಿಂದ ಶಂಕರ ಚವಾಣ್‌ 2,566 ಮತಗಳನ್ನು ಪಡೆದು ವಿಜಯಿ ಆಗಿದ್ದಾರೆ.

ಚುನಾವಣೆಯಲ್ಲಿ ಫಲಿತಾಂಶ ಹೊರ ಬೀಳುತ್ತಲೇ ಅಮರಕುಮಾರ ಖಂಡ್ರೆ ನೇತೃತ್ವದ ಪೆನಲ್‌ನ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಕಾರ್ಖಾನೆ ಕಚೇರಿ ಅಧೀಕ್ಷಕ ರಮೇಶ ಚಿದ್ರಿ, ಲೆಕ್ಕಿಗ ಅಮರೇಶ್ವರ ಮೋಹಿತೆ, ಶ್ರೀನಿವಾಸ ನೆಲವಾಡೆ, ಗಣೇಶ ಪಾಟೀಲ, ಉಮಾಕಾಂತ ಚಿಟ್ಮೆ, ದಿಲೀಪ, ರಾಜೇಂದ್ರ, ವೈಜಿನಾಥ ಸೇರಿದಂತೆ ಮುಂತಾದವರು ಅಮರ ಖಂಡ್ರೆ ಅವರನ್ನು ಸನ್ಮಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.