ADVERTISEMENT

ಅನುಭವ ಮಂಟಪದ ಶೇ70ರಷ್ಟು ಕಾಮಗಾರಿ ಪೂರ್ಣ: ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 5:48 IST
Last Updated 4 ಫೆಬ್ರುವರಿ 2026, 5:48 IST
ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಆಗಿರುವುದಕ್ಕೆ ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಈಶ್ವರ ಖಂಡ್ರೆ ಅವರನ್ನು ಸನ್ಮಾನಿಸಲಾಯಿತು. ಶಶಿಕಾಂತ ದುರ್ಗೆ, ಬಸವರಾಜ ಕೋರಕೆ ಇದ್ದರು
ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಆಗಿರುವುದಕ್ಕೆ ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಈಶ್ವರ ಖಂಡ್ರೆ ಅವರನ್ನು ಸನ್ಮಾನಿಸಲಾಯಿತು. ಶಶಿಕಾಂತ ದುರ್ಗೆ, ಬಸವರಾಜ ಕೋರಕೆ ಇದ್ದರು   

ಬಸವಕಲ್ಯಾಣ: ‘ನಗರದ ತ್ರಿಪುರಾಂತ ಕೆರೆ ದಂಡೆಯಲ್ಲಿ ನಿರ್ಮಿಸುತ್ತಿರುವ ₹762 ಕೋಟಿ ವೆಚ್ಚದ ಅನುಭವ ಮಂಟಪದ ಕಾಮಗಾರಿ ಶೇ70 ಪೂರ್ಣಗೊಂಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಿಸಿರುವುದಕ್ಕಾಗಿ ನಗರದ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಮಂಟಪವನ್ನು ವರ್ಷದಲ್ಲಿ ಉದ್ಘಾಟಿಸಲಾಗುತ್ತದೆ. ಇದು ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ಎಲ್ಲರನ್ನೂ ಆಕರ್ಷಿಸಲಿದೆ. ದೇವಸ್ಥಾನ ಸಮಿತಿಯು ಬಸವತತ್ವದ ಪ್ರಸಾರ ಹಾಗೂ ಸ್ಮಾರಕಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿದೆ. ಸಮಾನತೆ, ಸಹೋದರತ್ವದ ಭಾವನೆ ಎಲ್ಲರಲ್ಲೂ ಬರಬೇಕು. ಎಲ್ಲರೂ ಒಗ್ಗಟ್ಟಿನಿಂದ ಇರಬೇಕು’ ಎಂದರು.

ADVERTISEMENT

ಬಸವೇಶ್ವರ ದೇವಸ್ಥಾನದ ಆಸ್ತಿ ಬಿಕೆಡಿಬಿಗೆ ಬೇಡ: ಬಸವೇಶ್ವರ ದೇವಸ್ಥಾನ ಪಂಚ ಸಮಿತಿಯು ಪ್ರತ್ಯೇಕವಾಗಿದೆ. ಅಲ್ಲದೆ ಹತ್ತಾರು ಶರಣ ಸ್ಮಾರಕಗಳ ವ್ಯವಸ್ಥೆ ಮಾಡಿ ಸಂರಕ್ಷಿಸುತ್ತಿದೆ. ಆದ್ದರಿಂದ ಇದರ ಆಸ್ತಿ ಮತ್ತು ವ್ಯಾಪ್ತಿಯಲ್ಲಿನ ಸ್ಮಾರಕಗಳನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ (ಬಿಕೆಡಿಬಿ) ಆಧೀನದಿಂದ ಕೈಬಿಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಸವೇಶ್ವರ ದೇವಸ್ಥಾನ ಪಂಚ ಸಮಿತಿಯಿಂದ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ದೇವಸ್ಥಾನ ವತಿಯಿಂದ ಸಂರಕ್ಷಿಸಿದ ಕೆಲ ಸ್ಮಾರಕಗಳನ್ನು ಈಗಾಗಲೇ ಅಭಿವೃದ್ಧಿ ಮಂಡಳಿಗೆ ನೀಡಲಾಗಿದೆ. ಆದರೂ, ಇನ್ನೂ ಇತರೆ ಕೆಲ ಸ್ಮಾರಕಗಳನ್ನು ಸಹ ಮಂಡಳಿ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಆದ್ದರಿಂದ ಲಿಂಗಾಯತ ಸಮಾಜದ ಮಹತ್ವದ ಸಂಸ್ಥೆಯ ಮುಖ್ಯಸ್ಥರಾದ ತಾವುಗಳು ನಮ್ಮ ಸಂಸ್ಥೆಗೆ ಬೆನ್ನೆಲುಬಾಗಿ ನಿಂತುಕೊಳ್ಳಬೇಕು. ಬಸವೇಶ್ವರ ದೇವಸ್ಥಾನ, ಬಸವಣ್ಣನವರ ಪರುಷಕಟ್ಟೆ, ಅಲ್ಲಮಪ್ರಭು ಗದ್ದುಗೆ ಮಠ, ಕಂಬಳಿ ಮಠ, ಬಸವಣ್ಣನವರ ಅರಿವಿನ ಮನೆ, ಅಕ್ಕಮಹಾದೇವಿ ಗವಿ, ತೇರು ಮೈದಾನ ಇವು ದೇವಸ್ಥಾನ ಸಮಿತಿಗೆ ಶಾಶ್ವತವಾಗಿ ಒಪ್ಪಿಸುವಂತೆ ಮಾಡಬೇಕು. ಇದಲ್ಲದೆ ದೇವಸ್ಥಾನ ಸಮಿತಿ ಅಧ್ಯಕ್ಷರಿಗೆ ಮಂಡಳಿಯ ಕಾಯಂ ಸದಸ್ಯರನ್ನಾಗಿ ನೇಮಿಸುವಂತೆ ನಿಯಮ ರೂಪಿಸಬೇಕು ಎಂದು ಸಹ ಒತ್ತಾಯಿಸಲಾಗಿದೆ.

ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪ ವಿಭಾಗಾಧಿಕಾರಿ ಪ್ರಕಾಶ ಕುದರಿ, ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥರೆಡ್ಡಿ, ಪ್ರಮುಖರಾದ ಮಲ್ಲಿಕಾರ್ಜುನ ಚಿರಡೆ, ವಿವೇಕಾನಂದ ಹೊದಲೂರೆ, ಶ್ರೀಕಾಂತ ಬಡದಾಳೆ, ವೀರಣ್ಣ ಹಲಶೆಟ್ಟೆ, ಬದ್ರಿನಾಥ ಪಾಟೀಲ, ನಾಗಯ್ಯ ಸ್ವಾಮಿ, ಮಲ್ಲಿನಾಥ ಮಂಠಾಳೆ, ರುದ್ರಮಣಿ ಮಠಪತಿ ಉಪಸ್ಥಿತರಿದ್ದರು.