ಭಾಲ್ಕಿ: ಬಸವ ಧರ್ಮ ಜಗತ್ತಿನ ಏಕೈಕ ವೈಜ್ಞಾನಿಕ ಧರ್ಮವಾಗಿದ್ದು, ಇದು ಶರೀರ ಮತ್ತು ಮನಸ್ಸಿಗೆ ಔಷಧಿಯಾಗಿದೆ ಎಂದು ಸಾಹಿತಿ, ಹಿರಿಯ ಪತ್ರಕರ್ತ ರಂಜಾನ್ ದರ್ಗಾ ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಸೋಮವಾರ ಆಯೋಜಿ ಸಿದ್ದ ಬಸವ ಜಯಂತಿ ಹಾಗೂಡಾ.ಬಸವಲಿಂಗ ಪಟ್ಟದ್ದೇವರು ರಚಿಸಿದ ‘ಬಸವಣ್ಣನವರ ವಚನಗಳು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಬಸವ ಧರ್ಮ ಮಾನವರನ್ನು ಶಿವ ಸ್ವರೂಪಿಗಳಾಗಿ ಕಾಣಲು ಸೂಚಿ ಸುತ್ತದೆ. ಈ ಧರ್ಮದಲ್ಲಿ ಎಲ್ಲವೂ ವೈಜ್ಞಾನಿಕತೆಯಿಂದ ಕೂಡಿದೆ. ಮೂಢ ನಂಬಿಕೆ, ಕಂದಾಚಾರ, ಅನಿಷ್ಟ ಆಚರಣೆಗಳಿಗೆ ಇಲ್ಲಿ ಅವಕಾಶ ವಿಲ್ಲ. ಮನಸ್ಸು ಏಕಾತ್ಮದಿಂದ ಲೋಕಾ ತ್ಮದ ಕಡೆಗೆ ಬರಲು ಪ್ರತಿಯೊ ಬ್ಬರು ಅಷ್ಟಾವರಣ, ಷಟಸ್ಥಲ, ಪಂಚಾ ಚಾರಗಳ ಬಗ್ಗೆ ತಿಳಿದುಕೊಂಡು ಅವು ಗಳ ಆಶಯದಂತೆ ಬದುಕು ನಡೆಸಬೇಕು ಎಂದು ತಿಳಿಸಿದರು.
ಬಸವಣ್ಣನವರು ವಚನಕಾರರು ಮಾತ್ರವಲ್ಲ ಅವರೊಬ್ಬ ಪರಿಸರ ವಾದಿ, ನ್ಯಾಯವಾದಿ, ವ್ಯಕ್ತಿತ್ವ ವಿಕಾಸಕರಾಗಿಯೂ ಇದ್ದರು. ಬಸವ ತತ್ತ್ವ ಚಿಂತನಾಕ್ರಮ ಹಾಗೂ ಬದುಕಿನ ವಿಧಾನ. ಯಾವುದೇ ಧರ್ಮದವರು ಪಾಲಿಸಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ, ಜೀವನ ರೂಪಿಸಿಕೊಳ್ಳಲು ಬಸವಣ್ಣನವರ ವಚನ ಸಾಹಿತ್ಯದ ಅಧ್ಯಯನ ಕೈಗೊಂಡು ಅವುಗಳ ಮಾರ್ಗದರ್ಶನದಂತೆ ಜೀವನ ಸಾಗಿಸಬೇಕು. ಮಾನವ ಬದುಕಿನ ಎಲ್ಲ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ದಿವ್ಯ ಔಷಧಿ ಇದೆ ಎಂದು ನುಡಿದರು.
ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಣ್ಣನವರು ಬಾಲ್ಯದಿಂದಲೇ ವಿಶಾಲ ಹೃದಯವುಳ್ಳ ವಿಶ್ವ ಮಾನವತಾವಾದಿ ಆಗಿದ್ದರು. ಅವರ ವಚನಗಳು ಬದುಕಿನ ಅನುಭವದ ಅಮೃತ ವಾಣಿಗಳಾಗಿವೆ. ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಸದ್ಗುಣಗಳನ್ನು ಬೆಳೆಸಿಕೊಳ್ಳಲು ನಿತ್ಯ ವಚನಗಳ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ್ ಮಾತನಾಡಿದರು. ಈ ವೇಳೆ ಬಾಲ ಬಸವಣ್ಣನ ವೇಷ ಧರಿಸಿದ್ದ ಮಕ್ಕಳು ಗಮನ ಸೆಳೆದರು.
ಆಡಳಿತಾಧಿಕಾರಿ ಮೋಹನರೆಡ್ಡಿ ಸ್ವಾಗತಿಸಿದರು. ಮಧುಕರ ಗಾಂವ್ಕರ್ ನಿರೂಪಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.