ಬೀದರ್: ‘ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಬೆಳೆ ಹಾನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿರುವ ಪ್ರತಿ ಹೆಕ್ಟೇರ್ಗೆ ಹೆಚ್ಚುವರಿ ₹8,500 ಸೇರಿದಂತೆ ಒಟ್ಟಾರೆ ₹300 ಕೋಟಿ ಬೆಳೆ ಹಾನಿ ಪರಿಹಾರ ಈ ತಿಂಗಳ 30ರೊಳಗೆ ಪಾವತಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಗುರುವಾರ (ಅ.16) ಸಂಜೆಯೊಳಗೆ ಮಳೆ ಹಾನಿ ಪ್ರದೇಶದ ತಹಶೀಲ್ದಾರರು ಪರಿಹಾರದ ಪೋರ್ಟಲ್ನಲ್ಲಿ ಹಾನಿಯ ಪ್ರಮಾಣವನ್ನು ಕಡ್ಡಾಯವಾಗಿ ದಾಖಲಿಸಿ, ಪರಿಹಾರ ನೀಡಲು ತುರ್ತು ಕ್ರಮ ವಹಿಸಬೇಕು’ ಎಂದು ಸೂಚನೆ ನೀಡಿದರು.
‘ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ನಿಯಮದಂತೆ ₹170 ಕೋಟಿ ಪರಿಹಾರ ಈಗಾಗಲೇ ಪಾವತಿಸಲಾಗುತ್ತಿದೆ. 30ರೊಳಗೆ ₹300 ಕೋಟಿ ಪರಿಹಾರ ಮೊತ್ತ ಪಾವತಿಸಲಾಗುವುದು’ ಎಂದು ಹೇಳಿದರು.
‘ಅಕಾಲಿಕ ಮಳೆಯಿಂದ ಉಂಟಾಗಿರುವ ಜೀವ ಹಾನಿ, ಬೆಳೆ ಹಾನಿ, ಮನೆ ಹಾನಿ, ಜಾನುವಾರು ಹಾನಿಗೆ ದೀಪಾವಳಿ ಹಬ್ಬದೊಳಗೆ ಪರಿಹಾರ ನೀಡಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ ಹಗಲಿರುಳು ಶ್ರಮಿಸಿ, ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬದವರ ನೆರವಿಗೆ ಧಾವಿಸಬೇಕು’ ಎಂದು ನಿರ್ದೇಶನ ನೀಡಿದರು.
ಬಸವಕಲ್ಯಾಣದಲ್ಲಿ 47, ಭಾಲ್ಕಿ 38, ಬೀದರ್ ತಾಲ್ಲೂಕಿನಲ್ಲಿ ಮನೆ ಹಾನಿಗೊಳಗಾದವರಿಗೆ ಪರಿಹಾರ ವಿತರಣೆ ವಿಳಂಬವಾಗಿರುವ ಕುರಿತಂತೆ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಸಚಿವರು,‘ಇಂದು ಅಥವಾ ನಾಳೆ ಸಂಜೆಯೊಳಗೆ ಮನೆ ಹಾನಿಯ ಪರಿಹಾರ ಸಂತ್ರಸ್ತರಿಗೆ ದೊರಕುವುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
‘ವಿಳಂಬ, ಕರ್ತವ್ಯಲೋಪ, ನಿರ್ಲಕ್ಷ್ಯ ತೋರಿರುವ ಅಧಿಕಾರಿ, ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು’ ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಪೋರ್ಟಲ್ನಲ್ಲಿ ದಾಖಲಿಸುವ ಪ್ರತಿಯೊಂದು ಮಾಹಿತಿಯನ್ನು ಗ್ರಾಮ ಪಂಚಾಯಿತಿ, ತಹಶೀಲ್ದಾರ್ ಕಚೇರಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಬಹಿರಂಗವಾಗಿ ಪ್ರಕಟಿಸಿ, ಡಂಗುರ ಹೊಡೆಸಿ, ಆಕ್ಷೇಪಣೆ ಆಹ್ವಾನಿಸಿ, ಯಾವುದೇ ಸಂತ್ರಸ್ತರ ಮಾಹಿತಿ ಕಣ್ತಪ್ಪಿನಿಂದ ಬಿಟ್ಟು ಹೋಗಿದ್ದರೆ ಆಗ ಅವರ ಹೆಸರು ಸೇರ್ಪಡೆ ಮಾಡಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಬೆಳೆ ವಿಮೆಯಡಿ ಬೆಳೆ ಋತುವಿನ ಮಧ್ಯದಲ್ಲಿ ವಿಕೋಪ ಉಂಟಾದರೆ ಪರಿಹಾರದ ಅವಕಾಶ ಕಲ್ಪಿಸಿದರೆ (ಮಿಡ್ ಸೀಸನ್ ಅಡ್ವರ್ಸಿಟಿ ಇನ್ವೋಕ್) ರೈತರಿಗೆ ಸೂಕ್ತ ಪರಿಹಾರ ಸಿಗುತ್ತದೆ. ಇನ್ವೋಕ್ ಆಗದಿದ್ದರೆ ರೈತರಿಗೆ ಅನ್ಯಾಯ ಆಗುತ್ತದೆ. ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ ಎಷ್ಟು ಜೀವ ಹಾನಿ ಆಗಿದೆ, ಎಷ್ಟು ಬೆಳೆ ಹಾನಿ ಆಗಿದೆ, ಎಷ್ಟು ಮನೆಗಳು ಹಾನಿ ಆಗಿವೆ, ರಸ್ತೆಗಳಿಗೆ ಹಾನಿ ಆಗಿದೆ ಮತ್ತು ಕೈಗೊಂಡಿರುವ ಕ್ರಮಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ಕೂಡಲೇ ಆಯಾ ಕ್ಷೇತ್ರ ವ್ಯಾಪ್ತಿಯ ಶಾಸಕರಿಗೆ ಮಾಹಿತಿ ಕೊಡಬೇಕು ಎಂದು ಎಲ್ಲಾ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ಚಂದ್ರಶೇಖರ ಪಾಟೀಲ, ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಪಾಲಿಕೆ ಆಯುಕ್ತೆ ರಮ್ಯಾ ರಂಗಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ರೆಡ್ಡಿ, ವಿವಿಧ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಹಾಗೂ ತಾಲ್ಲೂಕಿನ ಎಲ್ಲಾ ತಹಶೀಲ್ದಾರರು, ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಚಿವರಾದ ಈಶ್ವರ ಬಿ.ಖಂಡ್ರೆ ಹಾಗೂ ರಹೀಂ ಖಾನ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಂದಾಯ ಇಲಾಖೆಯ ನೂತನ ವಾಹನಗಳಿಗೆ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.