ಬೀದರ್: ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಮರಾಠ ಸಮುದಾಯದ ಏಳಿಗೆಗಾಗಿ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದ ನೌಬಾದ್ನಲ್ಲಿರುವ ಮರಾಠ ಸಮುದಾಯ ಭವನದಲ್ಲಿ ಸಮುದಾಯದ ಸಂಘಟನೆಗಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಹಾಗೆ, ರಾಜ್ಯದಲ್ಲಿ ಮರಾಠಿಗರ ಸಂಖ್ಯೆ ಅಧಿಕವಿದೆ. ಸಮುದಾಯದ ಜನ ಶ್ರಮಜೀವಿಗಳಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದವರ ಪಟ್ಟಿ ಸಿದ್ಧಪಡಿಸಿ ಅವರಿಗಾಗಿಯೇ ವಿಶೇಷ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಮರಾಠಿಗರ ಮೀಸಲಾತಿ ಬೇಡಿಕೆ ಕುರಿತು ಒಳಮೀಸಲಾತಿ ಕಾರ್ಯಗತಗೊಂಡ ನಂತರ ಮುಖ್ಯಮಂತ್ರಿಯವರ ಜೊತೆಗೆ ಚರ್ಚಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು.
ಮರಾಠ ಸಮುದಾಯ ಭವನದ ಕಟ್ಟಡ ಮತ್ತು ಬಸವಕಲ್ಯಾಣದ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕ ಪೂರ್ಣಗೊಳಿಸಲು ಅನುದಾನ ನೀಡಲಾಗುವುದು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮುದಾಯದ ವತಿಯಿಂದ ವಿಶೇಷ ಶಿಷ್ಯವೇತನ ನೀಡುವ ಚಿಂತನೆ ನಡೆದಿದೆ. ಮುಂಬರುವ ನವೆಂಬರ್ ತಿಂಗಳಲ್ಲಿ ಮರಾಠ ಸಮುದಾಯದ ಕಲ್ಯಾಣಕ್ಕಾಗಿ ಎಲ್ಲ ಪಕ್ಷದ ಮುಖಂಡರ ಜೊತೆ ಸಭೆ ಕರೆಯಲಾಗುವುದು.
ಮುಖಂಡರಾದ ಪದ್ಮಾಕರ ಪಾಟೀಲ, ನಾರಾಯಣ ಗಣೇಶ, ವೆಂಕಟರಾವ್ ಮೈಂದೆ, ತಾತ್ಯರಾವ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕರಾವ ಸೋನಜಿ, ದಿಗಂಬರರಾವ್ ಮಾನಕರಿ, ರಾಮರಾವ್ ವರವಟ್ಟಿಕರ್, ಬಾಬುರಾವ್ ಕಾರಬಾರಿ, ವಿಜಯಕುಮಾರ ಕಣಜಿಕರ್, ಕಿಶನರಾವ್ ಪಾಟೀಲ್ ಇಂಚೂರಕರ್, ಜನಾರ್ದನರಾವ್ ಬಿರಾದಾರ, ಅನೀಲಕುಮಾರ ಕಾಳೆ, ಗೋರಖ ಶ್ರೀಮಾಳಿ, ಅಮರ ಜಾಧವ್, ರೋಹಿತ ಸಾಠೆ, ಮಾಧವರಾವ್ ಬಿರಾದಾರ, ಡಿ.ಜಿ.ಜಗತಾಪ, ಬಾಬುರಾವ್ ಜೋಳದಾಪಕೆ, ಶೇಷರಾವ ಕಣಜಿಕರ್ ಹಾಗೂ ಪ್ರದೀಪ ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.