
ಮೊಸಳೆ
ಕೌಠಾ (ಬಿ)/ಜನವಾಡ (ಬೀದರ್ ಜಿಲ್ಲೆ): ಬೀದರ್ ತಾಲ್ಲೂಕಿನ ಜನವಾಡ ಹಾಗೂ ಔರಾದ್ ತಾಲ್ಲೂಕಿನ ಕೌಠಾ (ಬಿ) ದಲ್ಲಿ ಶುಕ್ರವಾರ ಮೊಸಳೆ ಕಾಣಿಸಿಕೊಂಡಿದೆ.
ಜನವಾಡ ಸಮೀಪದ ಮಹಾದೇವ ಮಂದಿರ ಬಳಿಯ ರಸ್ತೆಯಲ್ಲಿ ಗುರುವಾರ ರಾತ್ರಿ ಮೊಸಳೆ ಪತ್ತೆಯಾಗಿದೆ.
ಮೊಸಳೆ ಕಂಡ ಕೂಡಲೇ ಗ್ರಾಮಸ್ಥರು ಕಂಟ್ರೋಲ್ ರೂಂಗೆ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ ಅವರು ಅರಣ್ಯ ಇಲಾಖೆಯವರಿಗೆ ಮಾಹಿತಿ ರವಾನಿಸಿದ್ದಾರೆ.
ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಮೊಸಳೆ ಕಾಣಿಸಿಲ್ಲ.
ಮೊಸಳೆ ಪತ್ತೆಯಾದ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಯಿಂದ ತಪಾಸಣೆ ನಡೆಸಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲೂ ಮೊಸಳೆ ಗುರುತು ಪತ್ತೆಯಾಗಿಲ್ಲ ಎಂದು ಬೀದರ್ ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ಜಾಧವ್ ತಿಳಿಸಿದ್ದಾರೆ.
ಹತ್ತಿರವೇ ಇರುವ ಮಾಂಜ್ರಾ ನದಿಯಲ್ಲಿ ನೀರು ಕಡಿಮೆಯಾದ ಕಾರಣ ಮೊಸಳೆ ಹೊರಗೆ ಬಂದಿದೆ. ಪುನಃ ಅದು ನದಿಯೊಳಗೆ ಹೋಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಕೌಠಾ (ಬಿ) ಗ್ರಾಮದಲ್ಲಿ ಡಂಗುರ ಸಾರಲಾಗಿದೆ. ನದಿ ಪಾತ್ರದಲ್ಲಿ ಜನ ಓಡಾಡಬಾರದು. ಜಾನುವಾರುಗಳನ್ನು ಮೇಯಿಸಬಾರದು. ಎಚ್ಚರಿಕೆ ವಹಿಸಬೇಕೆಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.