ಬೀದರ್: ಯುವ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ್ ಅವರ ಆತ್ಮಹತ್ಯೆ ಘಟನೆಯನ್ನು ತನಿಖೆ ನಡೆಸಿ, ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಸಂಬಂಧ ಮಹಾಸಭಾ ಪದಾಧಿಕಾರಿಗಳು ನಗರದಲ್ಲಿ ಬೀದರ್ ರೈಲ್ವೆ ಪೊಲೀಸ್ ಎಸ್ಪಿ ಸೌಮ್ಯಲತಾ ಎಸ್.ಕೆ. ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಬಡ ಕುಟುಂಬದಲ್ಲಿ ಹುಟ್ಟಿ, ಉಪಜೀವನಕ್ಕಾಗಿ ವ್ಯವಹಾರ ಮಾಡುವಾಗ ಏನೋ ಏರುಪೇರಾಗಿದೆ. ಸಚಿನ್ ಅವಲಂಬಿತರು ಬೀದಿ ಪಾಲಾಗುವ ಸಂದರ್ಭ ಬಂದಿದೆ. ಇಡೀ ಘಟನೆಯ ಕೂಲಂಕಶ ತನಿಖೆ ನಡೆಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ದತ್ತಾತ್ರಿ ವಿಶ್ವಕರ್ಮ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರಶಾಂತ ವಿಶ್ವಕರ್ಮ, ಉಪಾಧ್ಯಕ್ಷರಾದ ಸೋಮನಾಥ ಪಾಂಚಾಳ್, ಪಾಂಡುನಾಗ್ ಪಾಂಚಾಳ್, ಮಹಾದೇವ ಪಾಂಚಾಳ್, ಸಂಜುಕುಮಾರ್ ಪಾಂಚಾಳ್, ಮಂಜುನಾಥ್ ಪಾಂಚಾಳ್, ಗಣಪತ್ ರಾವ್ ಪಾಂಚಾಲ್ ಉಪಸ್ಥಿತರಿದ್ದರು.
ಬೀದರ್ ರೈಲ್ವೆ ಪೊಲೀಸ್ ಎಸ್ಪಿ ಸೌಮ್ಯಲತಾ ಎಸ್.ಕೆ. ಅವರು ಸಚಿನ್ ಪಾಂಚಾಳ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸ್ಥಳೀಯ ರೈಲ್ವೆ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.