
ಹುಮನಾಬಾದ್ (ಬೀದರ್ ಜಿಲ್ಲೆ): ತಾಲ್ಲೂಕಿನ ಡಾಕುಳಗಿ ಗ್ರಾಮದಲ್ಲಿ ನೆಲ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಬುಧವಾರ ರಾತ್ರಿ 9ರ ಸುಮಾರಿಗೆ ನೆಲದಡಿಯಿಂದ ಭಾರಿ ಶಬ್ದ ಕೇಳಿ ಬಂದಿತು. ಆನಂತರ ನೆಲ ಕಂಪಿಸಿತು. ಇದರಿಂದ ಗ್ರಾಮಸ್ಥರು ಆತಂಕಗೊಂಡು ಮನೆಯೊಳಗಿಂದ ಹೊರಗೆ ಓಡಿಬಂದರು.
‘ನೆಲ ಕಂಪಿಸಿ ಮನೆಯಲ್ಲಿದ್ದ ವಸ್ತುಗಳು ಅಲುಗಾಡಿವೆ. ಭೂಕಂಪನದಂತಹ ಅನುಭವ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅಧಿಕಾರಿಗಳ ಭೇಟಿ: ಗ್ರಾಮಕ್ಕೆ ತಹಶೀಲ್ದಾರ್ ಅಂಜುಂ ತಬಸುಮ್ ಅವರು ಅಧಿಕಾರಿಗಳ ತಂಡದೊಂದಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿ, ‘ಭೂಕಂಪನ ಸಂಭವಿಸಿರುವ ಬಗ್ಗೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ. ಡಾಕುಳಗಿ, ಸಿಂಧಬಂದಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನ ಯಾವುದೇ ರೀತಿಯ ಆತಂಕ ಪಡಬೇಕಿಲ್ಲ. ಮುನ್ನೆಚ್ಚರಿಕೆಯಿಂದ ಇರಬೇಕು’ ಎಂದರು. ಪಿಡಿಒ ರಾಜಕುಮಾರ್ ಬುಳ್ಳಾ ಸೇರಿದಂತೆ ಇತರರು ಇದ್ದರು.
ಈ ಹಿಂದೆಯೂ ತಾಲ್ಲೂಕಿನ ಡಾಕುಳಗಿ, ನಿಂಬೂರ್, ಸೀತಾಳಗೇರಾ, ಹುಣಸನಾಳ, ಕುಮಾರ್ ಚಿಂಚೋಳಿ ಗ್ರಾಮಗಳಲ್ಲಿ ಇದೇ ರೀತಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.