ಕಮಲನಗರ: ತಾಲ್ಲೂಕಿನ ದಾಬಕಾ (ಸಿ) ಗ್ರಾಮದ ಶುಭಂ ಪಾಟೀಲ ಅವರು ದಾಬಕಾ ಹೊರವಲಯದಲ್ಲಿ ಬರುವ ಎರಡು ಎಕರೆ ಜಮೀನಿನಲ್ಲಿ ಸಮೃದ್ಧವಾಗಿ ಚೆಂಡು ಹೂ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಪದವಿಧರರಾದ ಶುಭಂ ಅವರು ಖಾಸಗಿ, ಸರ್ಕಾರಿ ಕೆಲಸಕ್ಕೆ ಅಲೆಯದೆ ಭೂಮಿಯನ್ನು ನಂಬಿ ಎರಡು ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಚೆಂಡು ಹೂ ಬೆಳೆಸಿದ್ದಾರೆ.
ಕೃಷಿ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಈ ನಿಟ್ಟಿನಲ್ಲಿ 2 ವರ್ಷಗಳಿಂದ ಕೃಷಿ ನಂಬಿ ಜೀವನ ಸಾಗಿಸುತ್ತಿದ್ದೇನೆ. ಒಂದು ಸಸಿಗೆ ₹5ಯಂತೆ ಒಟ್ಟು 1 ಲಕ್ಷ ವೆಚ್ಚ ಮಾಡಿ 4-5 ಸಾವಿರ ಚೆಂಡು ಹೂವಿನ ಸಸಿಗಳನ್ನು ನೆಟ್ಟು ನೀರಾವರಿ ಬಳಸಿ ಪೋಷಿಸಲಾಗಿದೆ. ಒಂದು ಸಸಿಗೆ ಸುಮಾರು 2-3 ಕಿಲೋ ಹೂ ಬರುತ್ತದೆ. ಅದರಂತೆ ಉತ್ತಮ ಫಸಲು ಎಂದು ರೈತ ಶುಭಂ ಪಾಟೀಲ ಹೇಳುತ್ತಾರೆ.
ಚೆಂಡು ಹೂವಿನ ಸಸಿಗಳು ನೆಟ್ಟ ಬಳಿಕ ಗೊಬ್ಬರ, ಜಿಂಕ್ ಸಿಂಪಡಿಸಿದ ನಂತರ ಕಾಲಕಾಲಕ್ಕೆ ನೀರು ಹರಿಸಬೇಕು. ಒಂದು ಸಸಿಗೆ 4 ಅಡಿ ಅಗಲ ಮತ್ತು 2 ಅಡಿ ಉದ್ದ ಅಂತರದಲ್ಲಿ ನಾಟಿ ಮಾಡಲಾಗಿದೆ. ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಯಲ್ಲೂ ಗಿಡಗಳು ಹೂ ಬಿಡುತ್ತವೆ ಎಂದರು.
ನಮ್ಮಲ್ಲಿ ಬೆಳೆದಂತಹ ಚೆಂಡು ಹೂ ನೆರೆಯ ಉದಗೀರ, ಹೈದ್ರಾಬಾದ್ ಮತ್ತು ಔರಾದ್ ಹೂವಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಅದರಂತೆ ಉದಗೀರ, ಔರಾದ್ಗೆ ಹೂ ಸಾಗಿಸುತ್ತೇನೆ. ಕೆ.ಜಿ ಗೆ ₹40 ರಿಂದ ₹50 ಬರುವ ನಿರೀಕ್ಷೆ ಇದೆ ಎಂದು
ಹೇಳುತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.