ADVERTISEMENT

ಜನಪದ ದೇವರು ಕೊಟ್ಟ ವರ: ಉಪನ್ಯಾಸಕರ ಸಂಘದ ಅಧ್ಯಕ್ಷ ಓಕಾಂತ ಸೂರ್ಯವಂಶಿ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 14:05 IST
Last Updated 18 ಆಗಸ್ಟ್ 2021, 14:05 IST
ಬೀದರ್‌ನ ಬಸವರಾಜ ಹೆಗ್ಗೆ ಅವರ ನಿವಾಸದಲ್ಲಿ ನಡೆದ ಮನೆಯಂಗಳದಲ್ಲಿ ಜನಪದ ಜ್ಯೋತಿ ಕಾರ್ಯಕ್ರಮವನ್ನು ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾಂತ ಸೂರ್ಯವಂಶಿ ಉದ್ಘಾಟಿಸಿದರು
ಬೀದರ್‌ನ ಬಸವರಾಜ ಹೆಗ್ಗೆ ಅವರ ನಿವಾಸದಲ್ಲಿ ನಡೆದ ಮನೆಯಂಗಳದಲ್ಲಿ ಜನಪದ ಜ್ಯೋತಿ ಕಾರ್ಯಕ್ರಮವನ್ನು ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾಂತ ಸೂರ್ಯವಂಶಿ ಉದ್ಘಾಟಿಸಿದರು   

ಬೀದರ್: ಜನಪದ ದೇವರು ಕೊಟ್ಟ ವರವಾಗಿದೆ ಎಂದು ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾಂತ ಸೂರ್ಯವಂಶಿ ನುಡಿದರು.

ಮಹಾತ್ಮ ಗಾಂಧಿ ಮಿತ್ರ ಮಂಡಳಿ ಹಾಗೂ ಕರ್ನಾಟಕ ಜಾನಪದ ಪರಿಷತ್ ನಗರ ಘಟಕದ ವತಿಯಿಂದ ನಗರದ ರಾಂಪುರೆ ಕಾಲೊನಿಯ ಬಸವರಾಜ ಹೆಗ್ಗೆ ಅವರ ಮನೆಯಲ್ಲಿ ನಡೆದ ಮನೆಯಂಗಳದಲ್ಲಿ ಜನಪದ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಜನರು ಜನಪದ ಔಷಧಿಯನ್ನೇ ಬಳಸಿದರು. ಹೀಗಾಗಿ ನಾವು ಎಷ್ಟೇ ಮುಂದುವರಿದರೂ ಜನಪದ ಬೇಕೇ ಬೇಕು ಎಂದು ಹೇಳಿದರು.

ADVERTISEMENT

ಜನಪದ ಸಾಹಿತ್ಯ ಸಿಂಧು ನಾಗರಿಕತೆಯಿಂದ ಬಂದಿದೆ. ಆಗ ಜನ ಹಾಡುವುದು, ನೃತ್ಯ ಮಾಡುವುದನ್ನು ಮಾತ್ರ ಮಾಡುತ್ತಿದ್ದರು. ನಂತರ ಹಾಡುಗಳು ಅಕ್ಷರ ರೂಪ ಪಡೆದುಕೊಂಡವು. ಶರಣರ ವಚನಗಳ ರಚನೆಗೆ ಜನಪದ ಸಂಸ್ಕøತಿಯೇ ಮೂಲವಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ, ಜನಪದ ಸಂಸ್ಕøತಿಗೆ ಉತ್ತೇಜನ ನೀಡಲು ಕರ್ನಾಟಕ-ತೆಲಂಗಾಣ ಗಡಿಯಲ್ಲಿರುವ ಬೀದರ್‍ನಲ್ಲಿ ಸಾಂಸ್ಕøತಿಕ ಹಬ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಈ ಭಾಗದ ಜನಪದ ಕಲಾವಿದರು ಹಾಗೂ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಬೇಕು ಎನ್ನುವುದು ತಮ್ಮ ಬಯಕೆಯಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಉಪನ್ಯಾಸಕಿ ರೇಣುಕಾ ಪೂಜಾರಿ ಮಾತನಾಡಿ, ಜನಪದ ಸಂಸ್ಕೃತಿಯಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ ಎಂದು ನುಡಿದರು.

ಹಿಂದೆ ಮಹಿಳೆಯರು ಯಾವುದೇ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆಯದಿದ್ದರೂ, ಸಾವಿರಾರು ಹಾಡುಗಳನ್ನು ಹಾಡುತ್ತಿದ್ದರು. ಕುಟ್ಟುವ, ಬೀಸುವ, ಸೀಮಂತ, ಸೋಬಾನೆ, ತೊಟ್ಟಿಲು, ಜೋಗುಳ, ಸೀಗಿ, ಬುಲಾಯಿ ಪದಗಳು ಅವರ ನಾಲಿಗೆ ತುದಿ ಮೇಲೆ ನಲಿದಾಡುತ್ತಿದ್ದವು ಎಂದು ಹೇಳಿದರು.

ಪರಿಷತ್ ನಗರ ಘಟಕದ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ಮಾತನಾಡಿ, ಜನಪದ ಜೀವನ ಪದ್ಧತಿ ಮೈಗೂಡಿಸಿಕೊಂಡರೆ ಆರೋಗ್ಯ, ಆಯುಷ್ಯ ವೃದ್ಧಿಸುತ್ತದೆ ಎಂದು ಹೇಳಿದರು.

ಪನ್ನಾಲಾಲ್ ಹೀರಾಲಾಲ್ ಕಾಲೇಜು ಪ್ರಾಚಾರ್ಯ ಬಸವರಾಜ ಬುಳ್ಳಾ, ಚಿಟಗುಪ್ಪ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಾಚಾರ್ಯ ಮಾರುತಿ ರೆಡ್ಡಿ, ಶಿವಶಂಕರ ಬಾಮಂದಿ, ರಮೇಶ ಪಾಟೀಲ, ಮಹಾರುದ್ರ ಪೂಜಾರಿ, ಪ್ರಕಾಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಸಂತೋಷಿ ಬಿ. ಹೆಗ್ಗೆ ಉಪಸ್ಥಿತರಿದ್ದರು. ರಾಚಯ್ಯ ಸ್ವಾಮಿ ವಚನ ಗಾಯನ ಮಾಡಿದರು. ಬಸವರಾಜ ಹೆಗ್ಗೆ ಸ್ವಾಗತಿಸಿದರು. ಧನರಾಜ ಆನೆಕಲೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.