ಬಸವಕಲ್ಯಾಣ: ಗಣೇಶ ಚತುರ್ಥಿ ಅಂಗವಾಗಿ ಬುಧವಾರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಸಂಭ್ರಮದಿಂದ ನಡೆಯಿತು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಗಣೇಶ ಹಬ್ಬ ಆಚರಿಸಿದರು.
ಕೆಲವರು ಮೊದಲೇ ಗಣೇಶ ಮೂರ್ತಿ ತಂದಿಟ್ಟರೆ, ಬಹುತೇಕರು ಬೆಳಿಗ್ಗೆ ಮಾರುಕಟ್ಟೆಗೆ ಹೋಗಿ ಮೂರ್ತಿ, ಪುಷ್ಪಮಾಲೆ ಹಾಗೂ ಇತರೆ ಆಲಂಕಾರಿಕ ವಸ್ತುಗಳನ್ನು ಖರೀದಿಸಿ, ಮನೆಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು. ನೈವೇದ್ಯ ಅರ್ಪಿಸಿ ಕುಟುಂಬ ಸಮೇತರಾಗಿ ಪೂಜೆ ನೆರವೆರಿಸಿದರು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿನ ಪ್ರಮುಖ ಸ್ಥಳಗಳಲ್ಲಿ ಹಾಗೂ ವೃತ್ತಗಳಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಆಕರ್ಷಕವಾದ ಮಂಟಪಗಳನ್ನು ಸಿದ್ಧಪಡಿಸಿ, ವಾದ್ಯ ಮೇಳಗಳೊಂದಿಗೆ ಗಣೇಶನ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಒಯ್ದು ಕೂಡಿಸಲಾಗಿದೆ. ನಗರದ ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಪಟೇಲ ಚೌಕ್, ಈಶ್ವರ ನಗರ, ಶಹಾಪುರ ಓಣಿ, ಜೈಶಂಕರ ಕಾಲೊನಿ, ಹಿರೇಮಠ ಕಾಲೊನಿ, ತ್ರಿಪುರಾಂತ, ಗೋಸಾಯಿ ಗಲ್ಲಿ, ಶಿವಾಜಿ ಚೌಕ್, ಕುಂಬಾರ ಪಾಳಿ, ಧರ್ಮಪ್ರಕಾಶ ಓಣಿ, ಬನಶಂಕರಿ ಗಲ್ಲಿ ಮತ್ತಿತರೆಡೆ ದೊಡ್ಡ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.