ADVERTISEMENT

ಕರ್ನಾಟಕ ಪಶು ವಿಶ್ವವಿದ್ಯಾಲಯ ಘಟಿಕೋತ್ಸವ: ಚಿನ್ನದ ಪದಕ ಗಳಿಸಿದವರ ಮಾತುಗಳು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 10:31 IST
Last Updated 27 ಫೆಬ್ರುವರಿ 2026, 10:31 IST
<div class="paragraphs"><p>ಚಿನ್ನದ ಪದಕಗಳೊಂದಿಗೆ&nbsp;ಖುಷಿ,  ವಿಜಯಕುಮಾರ್‌ ಎಂ.ಸಿ. ಹಾಗೂ ಮಿಕಾ ಕೆ.ಆರ್‌</p></div>

ಚಿನ್ನದ ಪದಕಗಳೊಂದಿಗೆ ಖುಷಿ, ವಿಜಯಕುಮಾರ್‌ ಎಂ.ಸಿ. ಹಾಗೂ ಮಿಕಾ ಕೆ.ಆರ್‌

   

ಬೀದರ್: ಪದವಿಯಲ್ಲಿ ಅತಿ ಹೆಚ್ಚು ಪದಕಗಳನ್ನು ಪಡೆಯಬೇಕೆಂಬ ಗುರಿ ಇಟ್ಟುಕೊಂಡೇ ಓದಿದೆ. ಅದು ಈಗ ಸಾಕಾರ ಆಗಿದೆ...

ಹೀಗೆಂದವರು ಬಿವಿಎಸ್‍ಸಿ ಆ್ಯಂಡ್ ಎಎಚ್ ಪದವಿಯಲ್ಲಿ 16 ಚಿನ್ನದ ಪದಕಗಳ ಸಾಧನೆಗೈದ ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ 2023-24ನೇ ಬ್ಯಾಚ್‍ನ ವಿದ್ಯಾರ್ಥಿನಿ, ಉಡುಪಿಯ ಮಂದಾರ್ತಿಯ ಖುಷಿ.

ADVERTISEMENT

ಪದಕಗಳ ನಿರೀಕ್ಷೆ ಇತ್ತು. ಆದರೆ, 16 ಪದಕಗಳು ಬರುತ್ತವೆ ಎಂದು ಊಹಿಸಿರಲಿಲ್ಲ. ತುಂಬಾ ಖುಷಿಯಾಗಿದೆ. ರಾಜ್ಯಪಾಲರಿಂದ ಪದಕ ಸ್ವೀಕರಿಸಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಪ್ರತಿಕ್ರಿಯಿಸಿದರು.

‘ನನಗಾದ ಖುಷಿ ಹೇಳಿಕೊಳ್ಳಲು ಆಗುತ್ತಿಲ್ಲ’

‘ನನಗಾದ ಖುಷಿ ಹೇಳಿಕೊಳ್ಳಲು ಆಗುತ್ತಿಲ್ಲ. ಅಷ್ಟೊಂದು ಖುಷಿಯಾಗಿದೆ. ಒಂದು ಪದಕ ಬರಬಹುದು ಅಂದುಕೊಂಡಿದ್ದೆ. ಆರು ಚಿನ್ನದ ಪದಕಗಳು ಬಂದಿವೆ. ಇದಕ್ಕೆಲ್ಲ ನನ್ನ ಓದು ಒಂದೆಡೆಯಾದರೆ, ನನ್ನ ಶಿಕ್ಷಕರು ಹಾಗೂ ಸಪೋರ್ಟ್‌ ಮಾಡಿದ ಪೋಷಕರಿಗೆ ಸಲ್ಲುತ್ತದೆ’ ಎಂದು ಆರು ಚಿನ್ನದ ಪದಕಗಳಿಗೆ ಕೊರಳೊಡ್ಡಿದ ಬೆಂಗಳೂರಿನ ಹೆಬ್ಬಾಳದ ಹೈನು ವಿಜ್ಞಾನ ಕಾಲೇಜಿನ 2024–25ನೇ ಸಾಲಿನ ಬಿಟೆಕ್‌ (ಹೈನು ತಂತ್ರಜ್ಞಾನ) ಸ್ನಾತಕ ಪದವಿ ವಿದ್ಯಾರ್ಥಿನಿ ಭೂಮಿಕಾ ಕೆ.ಆರ್‌..

ಭೂಮಿಕಾ ಅವರು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಕಳಂಬೆಳ್ಳ ಗ್ರಾಮದವರು. ಸದ್ಯ ತಿಪಟೂರಿನ ‘ಅಕ್ಷಯ ಕಲ್ಪ ಫಾರ್ಮ್ಸ್‌ ಅಂಡ್‌ ಫುಡ್ಸ್‌’ನಲ್ಲಿ ಎಕ್ಸಿಕ್ಯೂಟಿವ್‌ ಎನ್‌ಪಿಡಿ ಆಗಿ ಕೆಲಸ ಮಾಡುತ್ತಿದ್ದಾರೆ.

ಎಲ್ಲರ ಬೆಂಬಲದಿಂದ ಸಾಧನೆ

ಉಪನ್ಯಾಸಕರು, ಮಾರ್ಗದರ್ಶಕರು ಹಾಗೂ ಪಾಲಕರ ಸಹಕಾರ ಮತ್ತು ಬೆಂಬಲದಿಂದಾಗಿಯೇ ಸ್ನಾತಕೋತ್ತರ ಪದವಿಯಲ್ಲಿ ಅತ್ಯಧಿಕ ಚಿನ್ನದ ಪದಕಗಳ ಸಾಧನೆ ಮಾಡಲು ಸಾಧ್ಯವಾಗಿದೆ...

2023-24ನೇ ಸಾಲಿನ ಎಂವಿಎಸ್‍ಸಿ ಕುಕ್ಕುಟಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಲಾಂಡ್ಲಹಳ್ಳಿಯ ವಿಜಯಕುಮಾರ ಅವರ ಪ್ರತಿಕ್ರಿಯೆ ಇದು.

ಸದ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವೆ. ಭವಿಷ್ಯದಲ್ಲಿ ಕಾಲೇಜಿನಲ್ಲಿ ಬೋಧನೆ ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು.

ಅತೀವ ಖುಷಿಯಾಗಿದೆ

ಮಗಳ ಸಾಧನೆಯಿಂದ ಅತೀವ ಖುಷಿಯಾಗಿದೆ ಎಂದು ಸಂತಸ ಹಂಚಿಕೊಂಡರು ಬಿವಿಎಸ್‍ಸಿ ಆ್ಯಂಡ್ ಎಎಚ್ ಪದವಿಯಲ್ಲಿ 16 ಚಿನ್ನದ ಪದಕಗಳ ಸಾಧನೆ ಮಾಡಿದ ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಖುಷಿ ತಾಯಿ ಸುಜಾತಾ.

ಖುಷಿ ತುಂಬಾ ಪರಿಶ್ರಮ ಪಟ್ಟಿದ್ದಳು. ಓದಿನತ್ತಲೇ ಗಮನ ಕೇಂದ್ರೀಕರಿಸಿದ್ದಳು. ಅವಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ನಿರೀಕ್ಷೆಗೂ ಹೆಚ್ಚು ಪದಕಗಳು ಬಂದಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.