
ಹುಮನಾಬಾದ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣರು, ಸಂತರು ಸೇರಿದಂತೆ ಭಕ್ತರನ್ನು ಶ್ರದ್ಧಾ ಭಕ್ತಿಯಿಂದ ತನ್ನೆಡೆಗೆ ಸಳೆಯುವಂತ ಅನೇಕ ಧಾರ್ಮಿಕ ಕ್ಷೇತ್ರಗಳು ನೆಲಸಿ, ತನ್ನದೇ ಆದ ಖ್ಯಾತಿ ಹೊಂದಿವೆ.
ಅದೇ ರೀತಿ ಜಯಸಿಂಹ (ನಗರ) ಎಂಬ ಪುರಾತನ ಹೆಸರು ಹೊಂದಿದ ಹುಮನಾಬಾದ್ನಲ್ಲಿ ಪ್ರತಿ ವರ್ಷವೂ ನಡೆಯುವ ಗ್ರಾಮದೇವರು ಶ್ರೀ ವೀರಭದ್ರೇಶ್ವರ ಜಾತ್ರೆ ಸರ್ವಧರ್ಮೀಯರ ಉತ್ಸವವಾಗಿ ನಡೆದುಕೊಂಡು ಬರುತ್ತಿದೆ.
ಈ ಜಾತ್ರೆಯಲ್ಲಿ ಬೀದರ್, ಕಲಬುರಗಿ ಜಿಲ್ಲೆ ಸೇರಿದಂತೆ ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟ್ರದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಮೂಲಕ ವೀರಭದ್ರೇಶ್ವರನ ದರ್ಶನ ಪಡೆದುಕೊಂಡು ಪುನೀತರಾಗುತ್ತಾರೆ.
ಮಕರ ಸಂಕ್ರಮಣ ದಿನದಿಂದ ಶುರುವಾಗುವ ಈ ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ, ಅಗ್ಗಿ ತುಳಿಯುವುದು ಹಾಗೂ ರಥೋತ್ಸವ ಜರುಗಲಿದೆ. ಪ್ರತಿವರ್ಷ ಜನವರಿ 26ರಂದು ಜರುಗುವ ಅದ್ಧೂರಿ ರಥೋತ್ಸವ ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಲಕ್ಷಾಂತರ ಭಕ್ತರು ಸೇರಿ ತೇರು ಎಳೆಯುವುದನ್ನು ನೋಡುವುದೇ ಒಂದು ಭಾಗ್ಯವಾಗಿದೆ.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಇದ್ದರೂ ಈ ಜಾತ್ರೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬಂದು ವೀರಭದ್ರೇಶ್ವರನ ದರ್ಶನ ಪಡೆದು ಉತ್ಸವದಲ್ಲಿ ಭಾಗಿಯಾಗುವುದು ಇಲ್ಲಿಯ ಸಂಪ್ರದಾಯವಾಗಿದೆ.
ಹಿನ್ನೆಲೆ: ಜಯಸಿಂಹ ನಗರ ಎಂಬುದು ಹುಮನಾಬಾದ್ನ ಪುರಾತನ ಹೆಸರು. ಅಂದು ಈ ಭಾಗದಲ್ಲಿ ಆಳ್ವಿಕೆ ನಡೆಸಿದ ರಾಜಾ ರಾಮಚಂದ್ರ ಈ ಐತಿಹಾಸಿಕ ವೀರಭದ್ರೇಶ್ವರ ದೇಗುಲ ನಿರ್ಮಾಣ ಮಾಡಿದ್ದರು ಎಂದು ಹೇಳಲಾಗುತ್ತದೆ. ಅತ್ಯುತ್ತಮ ಶಿಲ್ಪ ತಜ್ಞನಾಗಿದ್ದ ರಾಜಾ ರಾಮಚಂದ್ರ, ತನ್ನ ಆಡಳಿತಾವಧಿಯಲ್ಲಿ ಹೊಸ ಹೊಸ ದೇವಸ್ಥಾನಗಳನ್ನು ನಿರ್ಮಿಸುವಲ್ಲಿ ಅತೀವ ಆಸಕ್ತಿ ಹೊಂದಿದ್ದ.
ವೀರಭದ್ರೇಶ್ವರ ದೇವಸ್ಥಾನ ನಿರ್ಮಿಸಿದ ನಂತರ ಗರ್ಭಗುಡಿಯಲ್ಲಿ ಪ್ರತಿಮೆ ಸ್ಥಾಪಿಸುವ ದಿನ ಸಮೀಪಿಸಿದಾಗ ರಾಜಾ ರಾಮಚಂದ್ರನ ಕನಸಿನಲ್ಲಿ ಬಂದ ಸ್ವತಃ ವೀರಭದ್ರೇಶ್ವರ ದೇವರು, ಗಡವಂತಿ ಗ್ರಾಮದ ದೇವಸ್ಥಾನದಲ್ಲಿ ಇರುವ ತನ್ನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಆಜ್ಞಾಪಿಸಿದನಂತೆ. ಕನಸಿನಲ್ಲಿ ಆದ ದಿವ್ಯದರ್ಶನದಿಂದ ಗಡವಂತಿ ಗ್ರಾಮಕ್ಕೆ ಹೋಗಿ ವೀರಭದ್ರೇಶ್ವರ ಮೂರ್ತಿಯನ್ನು ತಂದು ಹುಮನಾಬಾದ್ ದೇಗುಲದಲ್ಲಿ ವಿಧಿ–ವಿಧಾನಗಳಂತೆ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ನೆರವೇರಿಸಿದ ಎಂಬ ಪ್ರತೀತಿ ಇದೆ.
ಈ ದೇವಸ್ಥಾನ ವಾಸ್ತುಶಿಲ್ಪ ಕಲೆಯ ಖಣಿ ಎಂದರೆ ತಪ್ಪಾಗದು. ಸೂಕ್ಷ್ಮ ಕುಸುರಿ ಕೆತ್ತನೆಯ ಆತ್ಯಾಕರ್ಷಕವಾದ ಸುಂದರ ಗೋಪುರ ಭಕ್ತರನ್ನು ತನ್ನೆಡೆಗೆ ಸೆಳೆಯುವಂತಿದೆ. ದೇಗುಲದ ಗರ್ಭಗುಡಿಯಲ್ಲಿರುವ ಮೂರ್ತಿ ನೋಡಿದರೆ ಸಾಕ್ಷಾತ್ ವೀರಭದ್ರೇಶ್ವರನೇ ಕಣ್ಣೆದುರು ನಿಂತಂತಿದೆ. ಗರ್ಭಗುಡಿಯಲ್ಲಿರುವ ದೇವರ ಮಂಟಪ ಕತ್ತಲೆಯಲ್ಲಿದ್ದರೂ ದೇವರ ಮೂರ್ತಿಯಿಂದ ಸದಾ ಝಗಮಗಿಸುತ್ತಿದೆ. ಇದರಿಂದ ಭಕ್ತರಿಗೆ ಕ್ಷಣಹೊತ್ತು ಸ್ವರ್ಗದಲ್ಲೇ ಇರುವಂತೆ ಭಾಸವಾಗುತ್ತದೆ. ಗರ್ಭಗುಡಿಯ ಮುಂಭಾಗದಲ್ಲಿ 8 ಕಲ್ಲಿನ ಕಂಬಗಳು, ಅದರ ಎದುರು 16 ಕಂಬಗಳು, ಅದರ ಮೇಲೆ 49 ಗಿಳಿಗಳು, ಮೂರು ಗೊಂಬೆ ಆಕಾರದ ಚಿತ್ರಗಳು, ಇದರ ಮುಂದೆ ಗಿಡಗಳು, ಕೆಳಭಾಗದಲ್ಲಿ ಕಲ್ಲಿನ ಗೋಲಾಕಾರದ ದೀಪಗಳಂತಿರುವ ಶಿಲ್ಪಗಳು ಕಣ್ಮನ ಸೆಳೆಯುತ್ತವೆ.
ಉತ್ತರದ ನಾಗರಶೈಲಿ ಹಾಗೂ ದಕ್ಷಿಣದ ದ್ರಾವಿಡ ಪದ್ಧತಿಯ ಸಂಗಮದಂತಿರುವ ದೇಗುಲದಲ್ಲಿ ಗರ್ಭಗೋಪುರ ಹಿಮಾಲಯದ ಕೇದಾರ, ಒಡಿಶಾದ ಭುವನೇಶ್ವರಿ ದೇವಾಲಯಗಳನ್ನು ನೆನಪಿಸಿದರೆ, ಮುಖ್ಯದ್ವಾರದ ಮೇಲ್ಗಡೆ ವಿನ್ಯಾಸ ದಕ್ಷಿಣದ ಮಧುರೈ, ಕಾಂಚಿನಗರ ದೇಗುಲಗಳನ್ನು ನೆನಪಿಸುವಂತಿದೆ. ಪೂರ್ವದ್ವಾರದ ಮೇಲೆ ಆದಿಕೇಶವನ ಕೆಳಗೆ ದೇವರ ಮೂರ್ತಿ ಇದ್ದು, ನಾಲ್ಕು ದಿಕ್ಕಿನಲ್ಲಿ ನಂದಿ ವಿಗ್ರಹಗಳಿವೆ. ಮೊದಲ ಸಾಲಿನ ಮಧ್ಯದಲ್ಲಿ ಪಾಂಡುರಂಗ ವಿಠ್ಠಲ ಸೊಂಟದ ಮೇಲೆ ಕೈಯಿಟ್ಟು ಭಕ್ತರ ಇಷ್ಟಾರ್ಥಗಳನ್ನು ಪೂರೈಸಲು ನಿಂತಂತೆ ಭಾಸವಾಗುತ್ತದೆ. ಎರಡೂ ಕೊನೆಗಳಲ್ಲಿ ಗರುಡ ಹಾಗೂ ಹನುಮಂತ ದೇವರು ಕೈಜೋಡಿಸಿ ನಿಂತಿರುವುದು ಗಮನ ಸೆಳೆಯುತ್ತದೆ.
ಮಹಾದ್ವಾರದ ಎದುರು 16 ಕಂಬಗಳ ವಿಶಾಲ ಮಂಟಪ ಅಂದಿನ ಶ್ರಮಜೀವಿಗಳ ಕಲಾ ಕೌಶಲ ಬಿಂಬಿಸುತ್ತದೆ. ಸೂರ್ಯೋದಯದ ಮೊದಲ ಕಿರಣ ಮಹಾದ್ವಾರದಿಂದ ನಂದಿ ಕೊಂಬಿನ ಮೂಲಕ ಗರ್ಭಗುಡಿಯಲ್ಲಿರುವ ವೀರಭದ್ರೇಶ್ವರ ಬಲಭಾಗದ ಹೆಬ್ಬೆಟ್ಟಿನ ಮೇಲೆ ಬೀಳುವುದು ವಿಶೇಷ. ಅಂದರೆ ಅಂದು ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದಿದ್ದರೂ ನಿರ್ಮಾತೃಗಳ ಬುದ್ದಿಕ್ಷಮತೆ, ನಿರ್ಮಾಣ ಶೈಲಿ ಹೇಗಿದ್ದರೆ ಚೆನ್ನ ಎಂಬ ದೂರದೃಷ್ಟಿ ಫಲವೇ ಈ ವೈಶಿಷ್ಟ್ಯ ಎನ್ನಬಹುದಾಗಿದೆ.
ಗರ್ಭಗುಡಿಯ ಮುಂಭಾಗದಲ್ಲಿ 4, ಎಡಭಾಗದಲ್ಲಿ 4 ಕಲ್ಲಿನ ಕಂಬಗಳಿವೆ. ಎಡಭಾಗಕ್ಕೆ ಭದ್ರಕಾಳಿ, ಬಲಗಡೆ ಸಣ್ಣ ನಂದಿ ಪ್ರತಿಮೆ, ನಂದಿ ಸುತ್ತಲೂ 16 ಸುಂದರ ಕುಸುರಿ ಕೆತ್ತನೆಯ ಕಂಬಗಳ ಮಂಟಪಗಳಿವೆ. ಇಂಥ ವಿಶಿಷ್ಟ ದೇಗುಲದ ಗುಡಿಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಎದುರುಗಡೆ ಇರುವ ದೇವರ ಮೂರ್ತಿ ಭಕ್ತಿ ಉಕ್ಕಿ ಹರಿಯುವಂತೆ ಮಾಡುತ್ತದೆ. ಸ್ಥಳೀಯರು ಪ್ರತಿದಿನ ದೇವರ ದರ್ಶನ ಮಾಡಿ ಪ್ರಸಾದದ ರೂಪದಲ್ಲಿ ನೀಡಲಾಗುವ ಹೂಗಳನ್ನು ತೆಗೆದುಕೊಂಡು ದೈನದಿಂದ ಚಟುವಟಿಕೆಗಳಲ್ಲಿ ತೊಡಗುವುದು ನಡೆದುಕೊಂಡು ಬಂದಿರುವ ಸಂಪ್ರದಾಯ.
ಇಂದಿನ ಜಂಜಾಟದ ಬದುಕಿನಲ್ಲಿ ನೆಮ್ಮದಿ ಕಾಣುವ ಸದಾಶಯದೊಂದಿಗೆ ದೇಗುಲಕ್ಕೆ ಭೇಟಿ ನೀಡುವ ಭಕ್ತರು ದೇವರ ಎದುರಿನ ಮಂಟಪದಲ್ಲಿ ಕುಳಿತು ಧ್ಯಾನ ಮಾಡಿದರೆ ಸ್ವರ್ಗಸದೃಶದ ಅನುಭವವಾಗುತ್ತದೆ. ಇನ್ನೂ ಇಲ್ಲೇ ಕುಳಿತುಕೊಳ್ಳಬೇಕು ಎಂದನಿಸುತ್ತದೆ.
ಚಂದ್ರಸೇನನ ಕಾಲದಲ್ಲಿ ಹೊಸದಾಗಿ ನಿರ್ಮಾಣ?: ಈ ದೇವಸ್ಥಾನವೂ ಜಯಸಿಂಹ ನಿರ್ಮಿಸಿದ ಎಂದು ಹೇಳುತ್ತಿರುವುದು ಒಂದೆಡೆಯಾದರೆ 1725ರಲ್ಲಿ ರಾಜಾ ರಾಮಚಂದ್ರ ಜಾಧವ್ ನಿರ್ಮಿಸಿದ ಎಂಬುದು ಇನ್ನೊಂದೆಡೆ. ಚಂದ್ರಸೇನ ರಾಜನ ಕಾಲದಲ್ಲಿ ಇದು ಹೊಸದಾಗಿ ನಿರ್ಮಾಣಗೊಂಡಿರಬಹುದು ಎಂದೂ ಹೇಳಲಾಗುತ್ತಿದೆ.