ಔರಾದ್: ತಾಲ್ಲೂಕಿನ ಕಂದಗೂಳ ಗ್ರಾಮದ ರಸ್ತೆ ಬದಿ ಭಿಕ್ಷೆ ಬೇಡುತ್ತಿರುವ 75 ವರ್ಷದ ವೃದ್ಧೆಯೊಬ್ಬರಿಗೆ ಮಾನವೀಯ ಅಭಯ ಸಿಕ್ಕಿದೆ.
ವೃದ್ಧೆಯೊಬ್ಬರು ಸಂಕಷ್ಟದಲ್ಲಿರುವ ಮಾಹಿತಿ ಪಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಅವರು ಸ್ವತಃ ಆ ಮಹಿಳೆ ಬಳಿ ಹೋಗಿ ಯೋಗಕ್ಷೇಮ ವಿಚಾರಿಸಿದ್ದಾರೆ.
ಸರಿಯಾಗಿ ಕೂಡಲು ಆಗದೆ, ಮಾತನಾಡಲು ಬಾರದ ಮುಪ್ಪಿನ ಅವ್ಯಸ್ಥೆಯಲ್ಲಿರುವ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆತಂದು ಉಪಚರಿಸಿದ್ದಾರೆ. ಅಧಿಕಾರಿಗಳನ್ನು ಕರೆಸಿ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಚೆನ್ನಾಗಿ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ.
‘ಈ ವೃದ್ಧೆ ಯಾರು ಎಂಬುದು ಗೊತ್ತಾಗಿಲ್ಲ. ಆದರೆ ಜನವಾಡ ಗ್ರಾಮದವರು ಎಂದು ತಿಳಿದುಬಂದಿದೆ. ನಾನು 15 ದಿನಗಳಿಂದ ಇವರು ರಸ್ತೆ ಬದಿ ಭಿಕ್ಷೆ ಬೇಡುವುದನ್ನು ಗಮನಿಸಿದ್ದೇನೆ. ಈ ವಿಷಯ ನ್ಯಾಯಾಧೀಶರಿಗೆ ತಿಳಿಸಿದಾಗ ಅವರು ತಕ್ಷಣ ನಮ್ಮ ಜತೆ ಬಂದು ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಲು ನೆರವಾಗಿದ್ದಾರೆ’ ಎಂದು ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ಬೆರಳಚ್ಚುಗಾರರಾಗಿರುವ ಬೋರ್ಗಿ ಗ್ರಾಮದ ಅನೀಲ ಮೇತ್ರೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.