
ಬೀದರ್ ನಗರದಲ್ಲಿ ಪ್ರತಿಭಟನಕಾರರನ್ನು ಸಚಿವ ಈಶ್ವರ ಖಂಡ್ರೆ ಸಮಾಧಾನಪಡಿಸಿದರು
ಬೀದರ್: ‘ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ಕನಕದಾಸರು ಕಟುವಾಗಿ ಖಂಡಿಸಿದ್ದರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನಕದಾಸರು ಸಮಾಜದ ಅಂಕುಡೊಂಕು, ಅಸಮಾನತೆ ಜಾತಿ ವ್ಯವಸ್ಥೆಯನ್ನು ತಮ್ಮ ಕೀರ್ತನೆಗಳ ಮೂಲಕ ಹೋಗಲಾಡಿಸಿದರು. ಕುಲಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆನೇನಾದರು ಬಲ್ಲಿರಾ ಎಂದು ಹೇಳುತ್ತಾ ಜಾತಿ ವ್ಯವಸ್ಥೆಯನ್ನು ಕಟುವಾಗಿ ಖಂಡಿಸಿದ್ದಾರೆ. ಕನಕದಾಸರು ಹಳ್ಳಿಹಳ್ಳಿಗೆ ಸಂಚಾರ ಮಾಡುವುದರ ಮೂಲಕ ಜನರಿಗೆ ಸತ್ಯ ಅಸತ್ಯತೆ ಬಗ್ಗೆ ಅರಿವು ಮೂಡಿಸಿದ್ದಾರೆ. ಮಹಾತ್ಮರು ಒಂದು ಜಾತಿಗೆ ಸಂಬಂಧಸಿದವರಲ್ಲ. ಅವರು ಇಡೀ ಸಮಾಜದ ಏಳಿಗೆಗೆ ದುಡಿದು ಸಮಾಜದಲ್ಲಿ ಸುಧಾರಣೆ ತಂದು ಶಾಂತಿ ಸಮಾನತೆ, ಭಾತೃತ್ವ ಸಾರಿದ್ದಾರೆ’ ಎಂದು ಹೇಳಿದರು.
ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ‘ಕನಕದಾಸರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗಬೇಕು. ಜಾತಿ, ಕುಲ, ಮತ ಎನ್ನದೆ ಒಂದಾಗಿ ಬಾಳಬೇಕು’ ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ಬೀದರ ಉಪನ್ಯಾಸಕ ಸಂಗಪ್ಪಾ ತಾಡಿ ಅವರು ಉಪನ್ಯಾಸ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಎದುರು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ಬೊಮ್ಮಗೊಂಡೇಶ್ವರ ವೃತ್ತ ಬಳಿ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಶಾಸಕ ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೇಪ್ಪ ಖಾಶಂಪುರ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಅಮೃತಾ ರಾವ್ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಚಾಲನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಔಧತಪೂರ ಮಚೇಂದ್ರ ಮುತ್ಯಾ, ತಹಶೀಲ್ದಾರ್ ರವೀಂದ್ರ ಧಾಮಾ, ಸಮಾಜದ ಮುಖಂಡರಾದ ಬಾಬುರಾವ ಮಲ್ಕಾಪುರೆ, ಸಂಜುಕುಮಾರ ಅತಿವಾಳ, ಪಂಡಿತರಾವ ಚಿದ್ರಿ, ಪೀರಪ್ಪಾ ಔರಾದ್ಕರ್, ಸಂಗಪ್ಪ ಮಲ್ಕಾಪುರೆ, ಸಂತೋಷ ಜೋಳ್ದಾಪೂಗಾ, ಹನುಮಂತ ಮಲ್ಕಾಪುರೆ, ವಿಜಯಕುಮಾರ ಸೋನಾರೆ, ರಾಜಕುಮಾರ ಕಂದಗುಳೆ ಸೇರಿದಂತೆ ಇತರರು ಹಾಜರಿದ್ದರು.
ವಿಳಂಬ ಖಂಡಿಸಿ ಪ್ರತಿಭಟನೆ
ಸಚಿವ ಈಶ್ವರ ಬಿ. ಖಂಡ್ರೆ ರಹೀಂ ಖಾನ್ ಅವರು ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕೆ ಬಾರದ ಕಾರಣ ಅದನ್ನು ಖಂಡಿಸಿ ಹಾಲುಮತ ಸಮಾಜದವರು ಪ್ರತಿಭಟನೆ ನಡೆಸಿದರು. ವೇದಿಕೆ ಮುಂಭಾಗಕ್ಕೆ ತೆರಳಿದ ಸಮಾಜದವರು ಜಿಲ್ಲಾಡಳಿತ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲಿದ್ದವರು ಸಮಾಧಾನಗೊಳಿಸಲು ಯತ್ನಿಸಿದರು. ಆದರೆ ಫಲ ನೀಡಲಿಲ್ಲ. ಸಚಿವರು ಕಾರ್ಯಕ್ರಮಕ್ಕೆ ಬರುವುದು ಅರ್ಧ ಗಂಟೆಗೂ ಹೆಚ್ಚು ವಿಳಂಬವಾಗಿತ್ತು. ಈ ವೇಳೆ ಸಚಿವದ್ವಯರು ವೇದಿಕೆಗೆ ಆಗಮಿಸಿ ಸಮಾಧಾನಪಡಿಸಿದರು. ನಂತರ ಈಶ್ವರ ಬಿ. ಖಂಡ್ರೆ ಮಾತನಾಡಿ ‘ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬರಲು ಸ್ವಲ್ಪ ತಡವಾಗಿದೆ. ಅದು ಹಾಗೂ ಇದು ಕನಕದಾಸರ ಜಯಂತಿಯೇ ಆಗಿದ್ದು ಅನ್ಯಥಾ ಭಾವಿಸಬಾರದು ಎಂದಾಗ ಪ್ರತಿಭಟನಕಾರರು ಶಾಂತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.