ADVERTISEMENT

ಮುಸ್ಲಿಂ ಮಕ್ಕಳು ಶಾಲೆಯಿಂದ ಹೊರಗುಳಿಯದಿರಲಿ: ಯು. ನಿಸಾರ್‌ ಅಹಮ್ಮದ್‌

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 5:56 IST
Last Updated 5 ನವೆಂಬರ್ 2025, 5:56 IST
ಸಭೆಯಲ್ಲಿ ಅಲ್ಪಸಂಖ್ಯಾತರ ಅಯೋಗದ ಅಧ್ಯಕ್ಷ ಯು. ನಿಸಾರ್‌ ಅಹಮ್ಮದ್‌ ಮಾತನಾಡಿದರು
ಸಭೆಯಲ್ಲಿ ಅಲ್ಪಸಂಖ್ಯಾತರ ಅಯೋಗದ ಅಧ್ಯಕ್ಷ ಯು. ನಿಸಾರ್‌ ಅಹಮ್ಮದ್‌ ಮಾತನಾಡಿದರು   

ಬೀದರ್‌: ‘ಮುಸ್ಲಿಂ ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಯಿಂದ ಹೊರಗುಳಿದಿದ್ದು, ಶಾಲೆಗೆ ಕರೆತರಲು ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಅಲ್ಪಸಂಖ್ಯಾತರ ಅಯೋಗದ ಅಧ್ಯಕ್ಷ ಯು. ನಿಸಾರ್‌ ಅಹಮ್ಮದ್‌ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಅಲ್ಪಸಂಖ್ಯಾತ ಸಮುದಾಯಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಬೀದರ್ ಜಿಲ್ಲೆಯಲ್ಲಿ ಮುಸ್ಲಿಂ ಹಾಗೂ ಸಿಖ್ ಸಮುದಾಯದ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ ಸಮುದಾಯದ ಮಕ್ಕಳು ಶಾಲೆಯಿಂದ ಹೆಚ್ಚು ಹೊರಗುಳಿದಿದ್ದಾರೆ. ಅವರು ಶಾಲೆಯ ಕಡೆಗೆ ಬರಲು ಅಧಿಕಾರಿಗಳು ಶ್ರಮಿಸಬೇಕು’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು. 2011ರ ಜನಗಣತಿ ಪ್ರಕಾರ ಮುಸ್ಲಿಂರಲ್ಲಿ ಶೇ 43ರಷ್ಟು ಜನ ಅಶಿಕ್ಷಿತರಿದ್ದಾರೆ. ಶೇ 15ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಸಮೀಕ್ಷೆ ಪ್ರಕಾರ, ಶೇ 6ರಷ್ಟು ಮಕ್ಕಳು 10ನೇ ತರಗತಿಗೆ ದಾಖಲಾಗಿದ್ದಾರೆ. ಡಿಡಿಪಿಐ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ, ಸಮಗ್ರ ಶಿಕ್ಷಣ ಯೋಜನೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ನಿರ್ದೇಶನ ನೀಡಿದರು.

‘ಅಂಗನವಾಡಿಯಿಂದ ಪ್ರಾಥಮಿಕ ಶಾಲೆಗೆ ಮಕ್ಕಳು ಕಡ್ಡಾಯವಾಗಿ ದಾಖಲಾಗುವಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಜಿಲ್ಲೆಯಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ಆಯೋಗಕ್ಕೆ ವರದಿ ಸಲ್ಲಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗೆ ಸೂಚಿಸಿದರು.

ಬಿದ್ರಿ ಕಲೆಗೆ ವಿಶೇಷ ಕೋರ್ಸ್‌

ಬೀದರ್‌ ಜಿಲ್ಲೆಯ ಬಿದ್ರಿ ಕಲೆ ಗೋಮಿತ್ರಿ ಸೀರೆ ನೇಕಾರರು ಹಾಗೂ ಸಿಕ್ಕಲಗಾರರ ಸಮುದಾಯದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳು ಯೋಜನಾ ವರದಿಯೊಂದನ್ನು ಶೀಘ್ರವೇ ರೂಪಿಸಿ ಆಯೋಗಕ್ಕೆ ಕಳುಹಿಸಬೇಕೆಂದು ಅಲ್ಪಸಂಖ್ಯಾತರ ಅಯೋಗದ ಅಧ್ಯಕ್ಷ ಯು. ನಿಸಾರ್‌ ಅಹಮ್ಮದ್‌ ಹೇಳಿದರು. ಬಿದ್ರಿ ಕಲೆಯನ್ನು ಹೆಚ್ಚು ಪ್ರೋತ್ಸಾಹಿಸಲು ಸಾಕಷ್ಟು ಅವಕಾಶಗಳಿವೆ. ಈ ನಿಟ್ಟಿನಲ್ಲಿ 6 ತಿಂಗಳ ವಿಶೇಷ ಕೋರ್ಸ್‌ ನೀಡುವ ಯೋಜನೆಯನ್ನು ಆಯೋಗದಿಂದ ಆರಂಭಿಸಲು ಚಿಂತನೆ ನಡೆದಿದೆ. ಬಸವಕಲ್ಯಾಣದಲ್ಲಿ ಗೋಮಿತ್ರಿ ಸೀರೆಗಳನ್ನು ನೇಯುವ ಅಲ್ಪಸಂಖ್ಯಾತರ ನೇಕಾರರ ಸಮುದಾಯಗಳಿದ್ದು ಅವರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ತಿಳಿಸಿದ ಅವರು ಸಿಕ್ಕೆಲಗಾರರ ಎಂಬ ಚಾಕು ಚೂರಿ ಹರಿತಗೊಳಿಸುವ ಸಮುದಾಯದ ಅಭಿವೃದ್ಧಿಗೂ ಸಹ ಯೋಜನೆವೊಂದನ್ನು ರೂಪಿಸಬೇಕು ಎಂದರು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜವಳಿ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು ಒಟ್ಟಾಗಿ ಸೇರಿ ಬಿದ್ರಿ ಗೋಮಿತ್ರಿ ಹಾಗೂ ಸಿಕ್ಕೆಲಗಾರ ಕ್ಲಸ್ಟರ್ ನಿರ್ಮಿಸಲು ಯೋಜನೆ ರೂಪಿಸಿದರೆ ಬರುವ ಬಜೆಟ್‌ನಲ್ಲಿ ವಿಶೇಷ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.