ADVERTISEMENT

ಭ್ರಷ್ಟ ಮತದಾರನಿಂದ ದೇಶಕ್ಕೆ ಗಂಡಾಂತರ

ಸಾಹಿತಿ ಶಿವಕುಮಾರ ಕಟ್ಟೆ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 16:03 IST
Last Updated 25 ಜನವರಿ 2022, 16:03 IST
ಬೀದರ್‌ನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು
ಬೀದರ್‌ನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು   

ಬೀದರ್: ‘ಪ್ರಜಾಪ್ರಭುತ್ವ ಸದೃಢತೆಗೆ ಹಾಗೂ ಸಮರ್ಥ ನಾಯಕರ ಆಯ್ಕೆಗೆ ಮತದಾನವೇ ಅಸ್ತ್ರವಾಗಿದೆ. ಮತದಾರ ಭ್ರಷ್ಟನಾದರೆ ದೇಶ ಗಂಡಾಂತರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ‘ ಎಂದು ಸಾಹಿತಿ ಶಿವಕುಮಾರ ಕಟ್ಟೆ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಪದವಿಪೂರ್ವ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮತದಾನದ ಮಹತ್ವ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಣ ಪಡೆದು ಮತ ಹಾಕಿದರೆ ಅವರಿಂದ ಅಭಿವೃದ್ಧಿ ನಿರೀಕ್ಷಿಸುವುದು ಸಾಧ್ಯವಿಲ್ಲ. ಮತದಾನ ಎನ್ನುವ ಪದದಲ್ಲಿ ದಾನವೆಂಬ ಪದವೂ ಇದೆ. ಅಂದರೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮತದಾನ ನಡೆಯಬೇಕು. ಅದಕ್ಕಾಗಿ ಯುವ ಸಮುದಾಯ ಜಾಗೃತರಾದರೆ ಇಡೀ ವ್ಯವಸ್ಥೆಯನ್ನೆ ಬದಲಾಯಿಸಬಹುದು’ ಎಂದು ಹೇಳಿದರು.

ADVERTISEMENT

‘ಯುವಕರು ಆಸಕ್ತಿಯಿಂದ ಮತದಾನದಲ್ಲಿ ಭಾಗವಹಿಸುವ ಮೂಲಕ ಮತದಾನದ ಶೇಕಡ ಪ್ರಮಾಣ ಹೆಚ್ಚಾಗಬೇಕು, ಚುನಾವಣೆಯಲ್ಲಿ ನಿಂತ ಯಾವೊಬ್ಬ ಅಭ್ಯರ್ಥಿಯೂ ಸರಿಯಿಲ್ಲವಾದಲ್ಲಿ ನೋಟಾ ಹಾಕಿಯಾದರೂ ಮತದಾನ ಮಾಡುವುದು ಅಗತ್ಯವಾಗಿದೆ’ ಎಂದು ತಿಳಿಸಿದರು.

’ಯುವಕರು ರಾಷ್ಟ್ರ ಪ್ರೇಮದಿಂದ ದೂರಾಗುತ್ತಿದ್ದಾರೆ. ರಾಷ್ಟ್ರೀಯ ಸಂಪತ್ತುಗಳಾದ ನೀರು, ವಿದ್ಯುತ್ ಮೊದಲಾದ ಸಂಪತ್ತು ಪೋಲಾಗದಂತೆ ಎಚ್ಚರ ವಹಿಸುವುದೂ ರಾಷ್ಟ್ರಪ್ರೇಮವಾಗುತ್ತದೆ. ಮತದಾನದ ಮೂಲಕವೇ ರಾಷ್ಟ್ರೀಯ ಸಂಪತ್ತನ್ನು ಉಳಿಸಿಕೊಳ್ಳಬಹುದಾಗಿದೆ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು‘ ಎಂದು ಹೇಳಿದರು.

ಪ್ರಾಚಾರ್ಯ ಬಸವರಾಜ ಬಲ್ಲೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೀನಾಕ್ಷಿ ಪಾಟೀಲ, ನೆಹರು ಪವಾರ ಇದ್ದರು. ಉಪನ್ಯಾಸಕ ಸಚಿನ ವಿಶ್ವಕರ್ಮ ಪ್ರಾಸ್ತಾವಿಒಕವಾಗಿ ಮಾತನಾಡಿದರು. ಮಂಗಲಾ ಗಡಮಿ ಸ್ವಾಗತಿಸಿದರು. ವಿದ್ಯಾರ್ಥಿ ವೀರೇಶ ನಿರೂಪಿಸಿದರು. ವೈಷ್ಣವಿ ವಂದಿಸಿದರು.

ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

ಬೀದರ್‌: ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಯಿತು.

ಸಂಸ್ಥೆಯ ಪ್ರಾಚಾರ್ಯ ಪ್ರಭು ಹೊಸಳ್ಳಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿ ಶಿವಕುಮಾರ ಕಟ್ಟೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು.

ಸಂಸ್ಥೆಯ ಕುಲಸಚಿವ ಶೇಖ್ ಸಿರಾಜೋದ್ದೀನ್, ಉಪನ್ಯಾಸಕರಾದ ಮಲ್ಲಿಕಾರ್ಜುನ್ ಬಿ.ಆರ್., ಬಕ್ಕಪ್ಪ ನಿರ್ಣಾಕರ್, ವಿಜಯಶೆಟ್ಟಿ, ಮಚ್ಛೇಂದ್ರ, ವಿಜಯಕುಮಾರ ಮಾನಕಾರಿ, ಡೇವಿಡ್, ಅಮೀರ್ ಪಟೇಲ್, ನಾಗರಾಜ ಶೆಟಕಾರ, ಮೊ.ವಕೀಲ್ ಪಟೇಲ್, ಚನ್ನಬಸಪ್ಪ ಪಾಟೀಲ, ರಾಜಶೇಖರ ಮಿತ್ರಾ, ಸದಾಶಿವ ಬಿರಾದಾರ, ಸಂತೋಷ ಪಾಟೀಲ, ಸಂತೋಷ ನಾಟಿಕರ, ತಾನಾಜಿ ಬಿರಾದಾರ, ಜ್ಯೋತಿ ಸೇಡಂಕರ್‌, ಗೀತಾ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.