ಬಸವಕಲ್ಯಾಣ: ಭಾನುವಾರ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಯಲ್ಲದಗುಂಡಿಯ ನಾಲೆ ತುಂಬಿ ಹರಿದಿದ್ದು ಇದನ್ನು ದಾಟಲು ಯತ್ನಿಸಿದ ಬಾಲಕ ಭಾಗ್ಯೇಶ ಪರಮೇಶ್ವರ (14) ಮೃತಪಟ್ಟಿದ್ದು ಅವನೊಂದಿಗಿದ್ದ ತಾಯಿ ಅನಿತಾ ಪರಮೇಶ್ವರ ನಾಪತ್ತೆ ಆಗಿದ್ದಾಳೆ.
ಮೃತ ಭಾಗ್ಯೇಶ ಹಾಗೂ ತಾಯಿ ಅನಿತಾ ಮತ್ತು ಈತನ ಅಣ್ಣ, ಚಿಕ್ಕಮ್ಮ ಈ ನಾಲ್ವರು ತೊಗರಿಯ ಉರುವಲು ತೆಗೆದುಕೊಡು ಬರುವುದಕ್ಕೆ ಹೊಲಕ್ಕೆ ಹೋಗಿದ್ದರು. ಮಧ್ಯಾಹ್ನ ಮಳೆ ಆರಂಭ ಆಗಿದ್ದರಿಂದ ಮನೆ ಕಡೆಗೆ ಹೊರಟಿದ್ದರು. ರಸ್ತೆ ಮಧ್ಯದಲ್ಲಿನ ಖೂನಿನಾಲೆ ಮಳೆ ನೀರಿನಿಂದ ತುಂಬಿ ಹರಿಯುತ್ತಿತ್ತು. ಆದ್ದರಿಂದ ಕೆಲಕಾಲ ನಾಲೆಯ ಆ ಕಡೆ ನಿಂತಿದ್ದರಾದರೂ ಮಳೆ ಪ್ರಮಾಣ ಹೆಚ್ಚುತ್ತಿದ್ದರಿಂದ ನಾಲೆ ದಾಟಲು ಅವರು ಯತ್ನಿಸಿದ್ದಾರೆ.
ನಾಲೆ ದಾಟುವಾಗ ನಾಲ್ವರಲ್ಲಿ ಇಬ್ಬರು ನೀರಿನ ರಭಸಕ್ಕೆ ಹೆದರಿ ಕಡೆಗೆ ಬಂದಿದ್ದಾರೆ. ಆದರೆ, ಭಾಗ್ಯೇಶ ನೀರಿನೊಂದಿಗೆ ಹರಿದು ಹೋಗಿದ್ದಾನೆ. ಮಳೆ ಕಡಿಮೆ ಆದಾಗ ಆತನ ಮೃತದೇಹ ದೊರೆತಿದೆ. ತಾಯಿ ಅನಿತಾ ಕೂಡ ನೀರಿನೊಂದಿಗೆ ಹೋಗಿದ್ದು ಸಂಜೆಯವರೆಗೂ ಪತ್ತೆ ಆಗಿಲ್ಲ.
ಗ್ರಾಮಸ್ಥರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಅನಿತಾಳನ್ನು ಹುಡುಕಿದ್ದಾರಾದರೂ ಸುಳಿವು ಸಿಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳಾದ ಆನಂದ ತಿಳಿಸಿದ್ದಾರೆ. ನಂತರದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯವರು ಸ್ಥಳಕ್ಕೆ ಬಂದಿದ್ದು ಮಹಿಳೆಯ ಮೃತದೇಹ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.