ಬೀದರ್: ಮದುವೆ ಆಗುವುದಾಗಿ ನಂಬಿಸಿ, ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿ ಸಂತೋಷ ಬಸಪ್ಪ ಮೇತ್ರೆಗೆ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯವು ಕಠಿಣ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಸಾಕ್ಷ್ಯನಾಶದ ಹಿನ್ನೆಲೆಯಲ್ಲಿ ಡಾ. ವೈಜಿನಾಥ ಬಿರಾದಾರ ಅವರಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸಚಿನ್ ಕೌಶಿಕ್ ಆರ್.ಎನ್. ಅವರು ಔರಾದ್ ತಾಲ್ಲೂಕಿನ ಸಂತಪುರ ನಿವಾಸಿ ಸಂತೋಷ ಬಸಪ್ಪ ಮೇತ್ರೆ ಹಾಗೂ ಬೀದರ್ನ ಡಾ. ವೈಜಿನಾಥ ಬಿರಾದಾರ ಅವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಪರಾಧಿ ಸಂತೋಷ ₹1 ಲಕ್ಷ ದಂಡವನ್ನು ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಬೇಕು. ದಂಡ ಭರಿಸಲು ತಪ್ಪಿದ್ದಲ್ಲಿ ಒಂದು ವರ್ಷ ಕಠಿಣ ಜೈಲು ಶಿಕ್ಷೆ ನೀಡಬೇಕು. ಇನ್ನು, ಡಾ. ವೈಜಿನಾಥ ಬಿರಾದಾರಗೆ ₹20 ಸಾವಿರ ದಂಡ ವಿಧಿಸಿದ್ದಾರೆ. ದಂಡ ಭರಿಸಲು ಆಗದಿದ್ದಲ್ಲಿ ಆರು ತಿಂಗಳು ಕಠಿಣ ಜೈಲು ಶಿಕ್ಷೆ ವಿಧಿಸಬೇಕೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
ನಿರಂತರ ಅತ್ಯಾಚಾರದಿಂದ ಬಾಲಕಿ ಗರ್ಭಿಣಿ ಆಗಿದ್ದಳು. ಡಾ. ವೈಜಿನಾಥ ಬಿರಾದಾರ ಗರ್ಭಪಾತ ಮಾಡಿ, ಸಾಕ್ಷ್ಯನಾಶ ಮಾಡಿದ್ದರು. ಈ ಸಂಬಂಧ ಸಂತಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು 2023ರ ಸೆಪ್ಟೆಂಬರ್ 2ರಂದು ಠಾಣೆಗೆ ದೂರು ಸಲ್ಲಿಸಿದ್ದರು.
ಅಂದಿನ ಔರಾದ್ ಸಿಪಿಐ ರಘುವೀರಸಿಂಗ್ ಠಾಕೂರ ತನಿಖೆ ನಡೆಸಿ, ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪೋಕ್ಸೋ ಕಾಯ್ದೆಯ ಕಲಂ 4, 5, 6 ಹಾಗೂ ಭಾರತೀಯ ದಂಡ ಸಂಹಿತೆ ಕಲಂ 376(2) ಅಡಿಯಲ್ಲಿ ಅತ್ಯಾಚಾರಿಗೆ ಕಠಿಣ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. ಸಾಕ್ಷ್ಯನಾಶ ಮಾಡಿದ ವೈದ್ಯನ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 201 ಅಡಿಯಲ್ಲಿ ಶಿಕ್ಷೆ ನೀಡಲಾಗಿದೆ.
ವಿಶೇಷ ಸರ್ಕಾರಿ ಅಭಿಯೋಜಕರಾಗಿ ಸಂತೋಷಕುಮಾರ ಟಿ. ಸಿದ್ಧೇಶ್ವರ ಸರ್ಕಾರದ ಪರ ವಾದ ಮಂಡಿಸಿದ್ದರು.
ಮುಖ್ಯಾಂಶಗಳು... 2023ರಲ್ಲಿ ಸಂತಪುರದಲ್ಲಿ ಘಟನೆ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಗರ್ಭಪಾತ ಮಾಡಿ ಸಾಕ್ಷ್ಯನಾಶಪಡಿಸಿದ ವೈದ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.