ಹುಲಸೂರ: ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಧಗೆ ಹೆಚ್ಚುತ್ತಿದೆ. ಇದರಿಂದ ಹೊಲದಲ್ಲಿ ಅಳಿದುಳಿದ ಬೆಳೆ ಕಮರುತ್ತಿದೆ. ಅತಿ ಬಿಸಿಲಿನಿಂದ ಬೆಳೆ ರಕ್ಷಣೆ ಜೊತೆಗೆ ಇನ್ನಿತರ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ತೊಡಕಾಗಿದೆ.
ತಾಲ್ಲೂಕಿನಲ್ಲಿ ಕಳೆದ ವರ್ಷ ಕೊನೆಯ ಹಂತದಲ್ಲಿ ಮಳೆ ಕೈಕೊಟ್ಟ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ಹೆಚ್ಚಿನ ತಾಪಮಾನಕ್ಕೆ ಬಾಡಿದ ಬೆಳೆ ಕಿತ್ತು, ಕೆಲ ರೈತರು ಭೂಮಿ ಹದಗೊಳಿಸಿದ್ದಾರೆ. ಇನ್ನೂ ಕೆಲವರು ಹದಗೊಳಿಸಬೇಕಿದೆ. ಉಳಿದ ಬೆಳೆಯನ್ನಾದರೂ ರಕ್ಷಿಸಿಕೊಳ್ಳಬೇಕಿದ್ದು, ತೀವ್ರ ಗತಿಯಲ್ಲಿ ಏರುತ್ತಿರುವ ಬಿಸಿಲು ಇದಕ್ಕೆ ಆಸ್ಪದ ನೀಡುತ್ತಿಲ್ಲ.
'ಕೃಷಿ ಚಟುವಟಿಕೆ ಕೈಗೊಳ್ಳಲು ಬೆಳಿಗ್ಗೆ ಹಾಗೂ ಸಂಜೆ ಹೊಲಕ್ಕೆ ಹೋಗಬೇಕು. ಬಿಸಿಲಿದ್ದಾಗ ಕೆಲಸ ಮಾಡಲು ಆಗಲ್ಲ. ನಸುಕಿನ 5ಕ್ಕೆ ಹೊಲಕ್ಕೆ ಹೋದರೆ, ಮಧ್ಯಾಹ್ನ 12 ಗಂಟೆಗೆ ಸುಸ್ತಾಗಿ, ವಿಶ್ರಾಂತಿ ಪಡೆಯಬೇಕು. ಸಂಜೆ ಹೆಚ್ಚು ಸಮಯ ಕೆಲಸ ಮಾಡಲು ಆಗಲ್ಲ. ಸುಡು ಬಿಸಿಲಲ್ಲಿ ಕೆಲಸ ಮಾಡಿದರೆ ಆರೋಗ್ಯ ಹಾಳಾಗುತ್ತದೆ' ಎಂದು ಮುಚಳoಬ ಗ್ರಾಮದ ರೈತ ಮಲ್ಲಿಕಾರ್ಜುನ್ ತಿಳಿಸಿದರು.
’ಈ ಬಾರಿ ನಮ್ಮಲ್ಲಿ 8 ಎಕರೆಯಲ್ಲಿ ಕಬ್ಬು ನಾಟಿ ಮಾಡಿದ್ದು ಬಿತ್ತನೆ ಮಾಡಿದ್ದೆ. ಈ ಮೊದಲು 20 ದಿನಕ್ಕೆ ನೀರು ಹಾಯಿಸಬೇಕಿತ್ತು. ಈಗ 10 ದಿನದೊಳಗೇ ನೀರು ಹಾಯಿಸಬೇಕಿದೆ. ಬೋರ್ವೆಲ್ ನೀರು ಸಹ ಕಡಿಮೆಯಾಗಿದೆ. ಎಷ್ಟೇ ನೀರು ಹಾಯಿಸಿದರೂ ಕಬ್ಬು ಬಾಡುತ್ತಿದೆ ಹಾಗೂ ಬೆಳವಣಿಗೆ ಕುಂಟಿತವಾಗುತ್ತಿದೆ. ನಮ್ಮ ಊರಿನಲ್ಲಿ ಹಲವರು ಬೆಳೆದ ತರಕಾರಿ ಬೆಳೆಗಳ ಪರಿಸ್ಥಿತಿಯೂ ಹೀಗೆಯೇ ಇದೆ. ಇಳುವರಿ ಕಡಿಮೆಯಾಗುವ ಆತಂಕವಿದೆ' ಎಂದು ಮುಸ್ಥಾಪುರ ಗ್ರಾಮದ ಕುಪೇಂದ್ರ ಪಾಟಿಲ ಅವರು ತಿಳಿಸಿದರು.
'ರೈತರು ಸದ್ಯಕ್ಕಂತೂ ಹೊಲಕ್ಕೇ ಹೋಗುವಂತಿಲ್ಲ. ಅಷ್ಟು ಬಿಸಿಲಿದೆ. ಬಿರು ಬಿಸಿಲಿಗೆ ಭೂಮಿ ಬಿಸಿಯಾಗಿ, ಒಂದು ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಮೂಲಂಗಿ, ಮಂತ್ಯ, ಸಬ್ಸಿಗೆ ಬೀಜ ಹುಟ್ಟಲೇ ಇಲ್ಲ. ಎಲ್ಲವನ್ನೂ ತೆರವು ಮಾಡಿ, ಮಳೆಗಾಗಿ ಕಾಯುತ್ತಿರುವೆ. ಮುಂಗಾರಿನ ಆರಂಭದಲ್ಲಿ ಎರಡು ಮಳೆ ಚೆನ್ನಾಗಾದರೆ ಹೆಸರು ಬಿತ್ತನೆ ಮಾಡುವೆ' ಎಂದು ಬೇಲೂರ ಗಾಮದ ರೈತ ಬಸವರಾಜ ಹೇಳಿದರು.
ಮಾವು, ಸಪೋಟಾ ಬೆಳೆಗೆ ಹಾನಿ: 'ಅತಿಯಾದ ಬಿಸಿಲಿನಿಂದ ಮಾವಿನಕಾಯಿ, ಸಪೋಟಾ ಹೂವು, ಕಾಯಿಗಳು ಉದುರುತ್ತಿವೆ. ಬೆಳೆ ಮಾರಾಟ ಸಂಬಂಧ ಕಂಪನಿಯೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೆ. ಉತ್ತಮ ಇಳುವರಿ ಸಿಗದೆ ಅವರಿಗೂ ನಷ್ಟವಾಗಿದೆ. ಲಾಭವಾಗಿದ್ದರೆ ಮುಂದಿನ ಬಾರಿ ನಮಗೂ ಹೆಚ್ಚು ದರ ನೀಡುತ್ತಿದ್ದರು' ಎಂದು ಹುಲಸೂರ ಪಟ್ಟಣದ ಹೊರವಯದಲ್ಲಿರುವ ರೈತ ಬಾಬುರಾವ್ ದೇಶಮುಖ್ ಹೇಳಿದರು.
'ಹೊಲದಲ್ಲಿ ಶೇ 25ರಷ್ಟು ಮಾವು, ಸಪೋಟಾ ಬೆಳೆ ಇದೆ. ಬಿಸಿಲಿಗೆ ಸುಟ್ಟ ಹಣ್ಣುಗಳು ವ್ಯರ್ಥವಾಗುತ್ತಿವೆ. ಹಣ್ಣುಗಳ ಗಾತ್ರವೂ ಕಡಿಮೆಯಾಗಿದೆ. ಈಗಾಗಲೇ ಈರುಳ್ಳಿ ಬೆಳೆ ಸಂಪೂರ್ಣ ನಷ್ಟವಾಗಿದೆ. ನಂತರ ಹಾಕಿದ್ದ ಪಾಲಕ್ ಸಹ ಸೊರಗಿದೆ. ಅಗತ್ಯವಿರುವಷ್ಟು ಮಳೆಯಾದರೆ ಒಣಬೇಸಾಯ, ತೋಟಗಾರಿಕೆ ಬೆಳೆ ಬೆಳೆಯುವ ಜಮೀನು ತಂಪು ಹಿಡಿದಿಡುತ್ತದೆ. ಇಲ್ಲದಿದ್ದರೆ ನೀರು ಹಾಯಿಸಲು ಮಾಡಬೇಕಾದ ಖರ್ಚು ರೈತರಿಗೆ ಹೊರೆಯಾಗುತ್ತದೆ' ಎಂದು ವಿವರಿಸಿದರು.
ಕೆಲ ದಿನಗಳಿಂದ ಪಟ್ಟಣದಲ್ಲಿ ಬಿಸಿಲಿನ ತಾಪ ಹೆಚ್ಚಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ. ಜನರು ಅನಗತ್ಯವಾಗಿ ಮನೆಯಿಂದ ಹೊರಬರದೆ ಮನೆಯಲ್ಲಿಯೇ ಇದ್ದು ತಂಪು ಪಾನೀಯಗಳನ್ನು ಸೇವಿಸುವುದು ಉತ್ತಮ. ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡಬೇಕುಶಶಿಕಾಂತ್ ಕನ್ನಾಡೆ ವೈದ್ಯಾಧಿಕಾರಿ
ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಮನೆಯಲ್ಲಿಯೂ ಕೂಡ ಬಿಸಿಗಾಳಿ ಹೆಚ್ಚಾಗುತ್ತದೆ. ಮಕ್ಕಳು ವೃದ್ಧರಿಗೆ ತೊಂದರೆಯಾಗುತ್ತಿದೆಅಣ್ಣರಾವ ಡೋಬಳೆ ನಿವೃತ್ತ ನೌಕರ
ಬಿಸಿಲಿನ ತಾಪಮಾನದಿಂದ ಪ್ರಾಣಿ-ಪಕ್ಷಿಗಳಿಗೆ ನೀರು ಸಿಗದಂತಾಗಿದೆ. ಜನರು ಮನೆ ಎದುರು ನೀರು ಇಟ್ಟು ಪ್ರಾಣಿ-ಪಕ್ಷಿಗಳ ನೀರಿನ ದಾಹ ತಣಿಸಬೇಕುಬಸವಕುಮಾರ ಕವಟೆ ಪ್ರಾಣಿ ಪ್ರಿಯ
ಹೈನುಗಾರಿಕೆಗೂ ಹೊಡೆತ
'ಮೂರು ಎಮ್ಮೆ ಎರಡು ಆಕಳು ಸಾಕಿದ್ದೇನೆ. ಬಿಸಿಲಿಗೆ ಆಕಳುಗಳು ಬಳಲುವುದರಿಂದ ಹಾಲು ನೀಡುವ ಪ್ರಮಾಣ ಸಹ ಕಡಿಮೆ ಆಗಿದೆ. ಈ ಮೊದಲು ದಿನಕ್ಕೆ 4 ಲೀಟರ್ ಹಾಲು ನೀಡುತ್ತಿದ್ದ ಆಕಳೊಂದು ಸದ್ಯ 2.5 ಲೀಟರ್ ಅಷ್ಟೇ ನೀಡುತ್ತಿದೆ' ಎಂದು ರೈತ ನಾಗೇಶ್ ಚೌರೆ ತಿಳಿಸಿದರು. 'ಕೊಟ್ಟಿಗೆಯಲ್ಲಿ ಧಗೆ ಹೆಚ್ಚಿರುವುದದರಿಂದ ದನಗಳನ್ನು ಹೊಲದಲ್ಲೇ ಕಟ್ಟಿಹಾಕುತ್ತೇವೆ. ಮೇವು ನೀರಿನ ಸಂಗ್ರಹ ಇದ್ದು ಈಗ ಅಷ್ಟೇನೂ ಸಮಸ್ಯೆ ಇಲ್ಲ. ಬಿಸಿಲಿನ ಕಾರಣಕ್ಕೆ ಕೂಲಿ ಕಾರ್ಮಿಕರೂ ಕೆಲಸಕ್ಕೆ ಬರುತ್ತಿಲ್ಲ' ಎಂದು ಸಮಸ್ಯೆ ಬಿಚ್ಚಿಟ್ಟರು ವಿದ್ಯುತ್ ಕಡಿತದ ಕಿರಿಕಿರಿ: ಬಿಸಿಲಿನ ತಾಪ ಒಂದೆಡೆಯಾದರೆ ವಿದ್ಯುತ್ ಕಡಿತದ ಕಿರಿಕಿರಿಯ ಇನ್ನೊಂದಡೆಯಾಗಿದೆ. ಬಿಸಿಯೋ ತಂಪೋ ಗಾಳಿಯಂತೂ ಬೀಸುತ್ತದೆ. ಆದರೆ ವಿದ್ಯುತ್ ಕಡಿತದಿಂದಾಗಿ ಬಾನೆಲೆಯಿಂದ ಬೆಂಕಿಗೆ ಹಾಕಿದಂತಾಗುತ್ತದೆ. ಇದು ಅತ್ಯಂತ ಯಾತನಾಮಯ ಸನ್ನಿವೇಶ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.