ADVERTISEMENT

ಬಸವಕಲ್ಯಾಣ: ಕೇಂದ್ರ ಸಚಿವ ಖೂಬಾ – ಶಾಸಕ ಸಲಗರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ

ಉದ್ವಿಗ್ನ ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 4:17 IST
Last Updated 14 ಆಗಸ್ಟ್ 2022, 4:17 IST
ಬಸವಕಲ್ಯಾಣದಲ್ಲಿ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ಕಾರಿನ ಹಿಂಬದಿಯ ನೇಮ್‌ಪ್ಲೇಟ್ ಹಾನಿ ಮಾಡಲು ಯತ್ನಿಸುತ್ತಿರುವುದು
ಬಸವಕಲ್ಯಾಣದಲ್ಲಿ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ಕಾರಿನ ಹಿಂಬದಿಯ ನೇಮ್‌ಪ್ಲೇಟ್ ಹಾನಿ ಮಾಡಲು ಯತ್ನಿಸುತ್ತಿರುವುದು   

ಬಸವಕಲ್ಯಾಣ: ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ, ಬೀದರ್ ಸಂಸದ ಭಗವಂತ ಖೂಬಾ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರ ಬೆಂಬಲಿಗರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಶನಿವಾರ ಸಂಜೆ ಮಾತಿನ ಚಕಮಕಿ ನಡೆಯಿತು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಭಗವಂತ ಖೂಬಾ ನೇತೃತ್ವದಲ್ಲಿ ತಿರಂಗ ಯಾತ್ರೆ ಸಂಗಮ, ಬೀದರ್‌, ಹುಮನಾಬಾದ್ ಮಾರ್ಗವಾಗಿ ಇಲ್ಲಿಗೆ ಬಂದಾಗ ಬಸವೇಶ್ವರ ವೃತ್ತದಲ್ಲಿ ಭಗವಂತ ಖೂಬಾ ಮತ್ತು ಶರಣು ಸಲಗರ ಬೆಂಬಲಿಗರ ನಡುವೆ ತಳ್ಳಾಟ ಆಗಿದೆ.‘ಶರಣು ಸಲಗರ ಅವರನ್ನು ಕಡೆಗಣಿಸಲಾಗುತ್ತಿದೆ’ ಎಂದು ಕೆಲ ಕಾರ್ಯಕರ್ತರು ಖೂಬಾ ಅವರ ವಿರುದ್ಧ ಘೋಷಣೆ ಕೂಗಿದರು. ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಪರ–ವಿರೋಧ ಆಕ್ರೋಶ ವ್ಯಕ್ತವಾಯಿತು. ಕೆಲವರು ಸಚಿವರ ಕಾರಿನ ಹಿಂಬದಿಗೆ ಧ್ವಜದ ಕೋಲಿನಿಂದ ಹೊಡೆದು,‘ನೇಮ್‌ ಪ್ಲೇಟ್‌’ಗೆ ಹಾನಿಗೊಳಿಸಿದರು. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಇದರ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ADVERTISEMENT

ಇಲ್ಲಿನ ಬಿಕೆಡಿಬಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್‌ ಬಾಬು ನೇತೃತ್ವದಲ್ಲಿ ಶಾಂತಿ ಸಂಧಾನ ನಡೆಸುವ ಯತ್ನ ನಡೆಯಿತು. ಪರಿಸ್ಥಿತಿ ತಿಳಿಗೊಂಡಿದೆ. ಆದರೆ, ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಲು ಭಗವಂತ ಖೂಬಾ ನಿರಾಕರಿಸಿದರು. ಡಿ.ಕಿಶೋರ್ ಬಾಬು ಮತ್ತು ಶರಣು ಸಲಗರ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.