
ಕಮಠಾಣ (ಜನವಾಡ): ‘ನವೀನ ತಂತ್ರಜ್ಞಾನ ಪರಿಚಯಿಸಲು ತರಬೇತಿಗಳು ಸಹಕಾರಿಯಾಗುತ್ತವೆ’ ಎಂದು ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ಪಿ.ಟಿ.ರಮೇಶ್ ಹೇಳಿದರು.
ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಪಶು ವೈದ್ಯಾಧಿಕಾರಿಗಳು ಹಾಗೂ ಆತ್ಮಾ ಸಿಬ್ಬಂದಿಗೆ ಹಮ್ಮಿಕೊಳ್ಳಲಾದ ‘ಸುಸ್ಥಿರ ಜಾನುವಾರು ಉತ್ಪಾದನೆಗೆ ನವೀನ ಪದ್ಧತಿಗಳು’ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪಶು ವೈದ್ಯಾಧಿಕಾರಿಗಳ ತರಬೇತಿ ಹೊಸ ಸುಸ್ಥಿರ ಜಾನುವಾರು ಉತ್ಪಾದನಾ ವ್ಯವಸ್ಥೆ, ಪ್ರಾಣಿಗಳ ಆರೋಗ್ಯ ನಿರ್ವಹಣೆ, ರೈತರಿಗೆ ಪ್ರಯೋಜನಕಾರಿ ಹವಾಮಾನ ಇತ್ಯಾದಿಗಳನ್ನು ಕೇಂದ್ರೀಕರಿಸಿದೆ’ ಎಂದು ತಿಳಿಸಿದರು.
‘ಶಿಬಿರಾರ್ಥಿಗಳು ತರಬೇತಿಯಲ್ಲಿ ಪಡೆದ ಜ್ಞಾನವನ್ನು ರೈತರೊಂದಿಗೆ ಹಂಚಿಕೊಳ್ಳಬೇಕು. ಅವರ ಆದಾಯ ಹೆಚ್ಚಳಕ್ಕೆ ನೆರವಾಗಬೇಕು’ ಎಂದು ಸಲಹೆ ಮಾಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿ,‘ಸುಸ್ಥಿರ ಜಾನುವಾರು ಮತ್ತು ಕೃಷಿ ಉತ್ಪಾದನೆಯು ರೈತರ ಆದಾಯ ವೃದ್ಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ’ ಎಂದು ತಿಳಿಸಿದರು.
‘ರೈತರು ಕೃಷಿ ಜತೆಗೆ ಪಶು ಪಾಲನೆಯಂಥ ಉಪ ಕಸುಬು ಕೈಗೊಂಡು ಆರ್ಥಿಕವಾಗಿ ಸದೃಢರಾಗಬೇಕು’ ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೀತಾ ಲೋಳಸುರಮಠ, ಡಾ.ಎಸ್.ಎನ್.ಜಾಧವ, ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಬಸವರಾಜ ಅವಟಿ ಮಾತನಾಡಿದರು. ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ.ಎಂ.ಕೆ. ತಾಂದಳೆ ಅಧ್ಯಕ್ಷತೆ ವಹಿಸಿದ್ದರು.
ಸಹ ಪ್ರಾಧ್ಯಾಪಕರಾದ ಡಾ.ಪ್ರಕಾಶಕುಮಾರ ರಾಠೋಡ್, ಡಾ.ಚನ್ನಪ್ಪಗೌಡ ಬಿರಾದಾರ, ಸಹಾಯಕ ಪ್ರಾಧ್ಯಾಪಕರಾದ ಡಾ.ಆಕಾಶ್ ಹಾಗೂ ಡಾ.ಕೊಟ್ರೇಶ್ ಇದ್ದರು.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಪಶು ವೈದ್ಯಾಧಿಕಾರಿಗಳು ಹಾಗೂ ಆತ್ಮಾ ಸಿಬ್ಬಂದಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.