
ಯಳಂದೂರು: ದೀಪಾವಳಿ ನಂತರ ವಾರಾಂತ್ಯದ ದಿನ ಶನಿವಾರ ರಂಗನಾಥ ದೇವಾಲಯ, ಬಿದ್ದಾಂಜನೇಯ ದೇವಳ ಹಾಗೂ ಸುತ್ತಮುತ್ತಲ ಪ್ರವಾಸಿ ತಾಣಗಳತ್ತ ಪ್ರವಾಸಿಗರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು.
ತಾಲ್ಲೂಕಿನ ಬಿಳಿಗಿರಿಬೆಟ್ಟ, ಕೃಷ್ಣಯ್ಯನ ಆಣೆಕಟ್ಟೆ, ಪಟ್ಟಣದ ಚಿಕ್ಕ ತಿರುಪತಿ ದೇವಸ್ಥಾನಗಳಿಗೆ ಬೆಳಗಿನಿಂದ ಸಂಜೆ ತನಕ ಮಹಿಳೆಯರು ಮತ್ತು ಮಕ್ಕಳು ಹಾಜರಾಗಿ, ಹಣ್ಣು ಕಾಯಿ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.
ಬೆಳಗಿನಿಂದಲೇ ದೇವಾಲಯದಲ್ಲಿ ಅಭಿಷೇಕ ಪೂಜೆಯೊಂದಿಗೆ ಭಕ್ತರ ದರ್ಶನಕ್ಕೆ ದೇಗುಲವನ್ನು ಮುಕ್ತಗೊಳಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಕಾರ್ತಿಕ ಶುದ್ಧ ಚೌತಿ ಜ್ಯೇಷ್ಠ ನಕ್ಷತ್ರದಲ್ಲಿ ದೇವರಿಗೆ ಹರಕೆ ಸಲ್ಲಿಸಿದರು. ಈ ಸಮಯದಲ್ಲಿ ದೇವರಿಗೆ ಹೂ ಹಾರಗಳ ಸಿಂಗಾರ ಮಾಡಲಾಗಿತ್ತು. ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು. ಈ ವೇಳೆ ದಾಸರು ಜಾಗಟೆ ಬಾರಿಸಿ, ಶಂಖನಾದ ಮೊಳಗಿಸಿದರು. ಮಂಗಳ ವಾದ್ಯಗಳ ನೀನಾದದೊಂದೊಗೆ ಸರ್ವಾಲಂಕೃತ ದೇವರನ್ನು ಪ್ರದಕ್ಷಿಣಾಕಾರದಲ್ಲಿ ಮೆರವಣಿಗೆ ಮಾಡಲಾಯಿತು ಎಂದು ದೇವಾಲಯದ ಪಾರುಪತ್ತೆಗಾರ ರಾಜು ಹೇಳಿದರು.
ಶಾಲೆಗಳು ಆರಂಭವಾಗಿದ್ದು, ವಾರಾಂತ್ಯದಲ್ಲಿ ಎರಡು ದಿನ ರಜೆ ಇರುವುದರಿಂದ ಮಕ್ಕಳು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆದರು.. ದಾಸೋಹದಲ್ಲಿ ಹೆಚ್ಚಿನ ಜನ ಸಂದಣಿ ಕಂಡುಬಂದಿತು. ವಾಹನಗಳ ಉದ್ದದ ಸಾಲು ಕಂಡುಬಂದಿತು, ಪಾದ ಬೆಟ್ಟದ ಸಮೀಪದ ಬಿದ್ದಾಂಜನೇಯ ಗುಡಿಗೂ ಭಕ್ತರು ತೆರಳಿ ಪೂಜೆ ಪುನಷ್ಕಾರ ನೆರವೇರಿಸಿ, ಹಸಿರು ತುಂಬಿದ ಕೃಷ್ಣಯ್ಯನಕಟ್ಟೆ ನಿಸರ್ಗ ಕಣ್ತುಂಬಿಕೊಂಡರು.
ಶ್ರೀನಿವಾಸ ದೇಗುಲಕ್ಕೆ ಭಕ್ತರ ಲಗ್ಗೆ:
ಪಟ್ಟಣದ ಸುವರ್ಣ ತಿರುಮಲ ಪ್ರತಿಷ್ಠಾನದ ಚಿಕ್ಕ ತಿರುಪತಿ ದೇವಳದಲ್ಲಿ ಶನಿವಾರ ಅಪಾರ ಸಂಖ್ಯೆಯ ಭಕ್ತರು ಸಂಜೆ ತನಕ ಶ್ರೀನಿವಾಸ, ಮಹಾಲಕ್ಷ್ಮಿ ಹಾಗೂ ಅಷ್ಟ ಮಾತೃಕೆಯರ ದರ್ಶನ ಪಡೆದರು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಸಂಜೆ ಮೆರವಣಿಗೆ ನಡೆಯಿತು. ಭಕ್ತರು ಅನ್ನದಾಸೋಹ ಸೇವೆಯಲ್ಲಿ ಪಾಲ್ಗೊಂಡಿದ್ದರು.
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದಲ್ಲಿ ಶನಿವಾರ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಭಕ್ತರ ಉದ್ಘೋಷಗಳ ನಡುವೆ ಮೆರವಣಿಗೆ ಮಾಡಲಾಯಿತು.
ರಂಗಪ್ಪನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.