ADVERTISEMENT

ಬೆಂಡರವಾಡಿ: ಅದ್ದೂರಿಯಾಗಿ ಜರುಗಿದ ಲಕ್ಷ್ಮೀನಾರಾಯಣ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 8:19 IST
Last Updated 3 ಮಾರ್ಚ್ 2026, 8:19 IST
ಚಾಮರಾಜನಗರ ತಾಲ್ಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಸೋಮವಾರ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಜರುಗಿತು
ಚಾಮರಾಜನಗರ ತಾಲ್ಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಸೋಮವಾರ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಜರುಗಿತು   

ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಸೋಮವಾರ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಹಲವು ಗ್ರಾಮಗಳ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ತೇರಿಗೆ ಬಾಳೆಹಣ್ಣು, ವೀಳ್ಯದೆಲೆ ತೂರಿ ರಥ ಎಳೆದು ಸಂಭ್ರಮಿಸಿದರು.

ನಂದಿಧ್ವಜ, ಬ್ಯಾಂಡ್‌ ಸೆಟ್‌, ನಗಾರಿ, ಕೊಂಬು–ಕಹಳೆ, ಸತ್ತಿಗೆ, ಸೂರಿಪಾಣಿ, ವೀರಮಕ್ಕಳ ಕುಣಿತ ರಥೋತ್ಸವದ ಅಂದವನ್ನು ಹೆಚ್ಚಿಸಿದ್ದವು. ಬೆಳಿಗ್ಗೆ 10.15ರ ಸುಮಾರಿಗೆ ನಾರಾಯಣಸ್ವಾಮಿ ದೇವಸ್ಥಾನದಿಂದ ಆರಂಭವಾದ ತೇರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಮಧ್ಯಾಹ್ನ 12.30ರ ಹೊತ್ತಿಗೆ ಸ್ವಸ್ಥಾನ ಸೇರಿತು. ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.

ADVERTISEMENT

ರಥೋತ್ಸವಕ್ಕೆ ಪೂರ್ವಭಾವಿಯಾಗಿ ಭಾನುವಾರ ಬೆಳಗಿನ ಜಾವ ಭಕ್ತರು ಉರುಳು ಸೇವೆ ಮಾಡಿದರು. ಕೊಂಡದ ಗುಳಿಪೂಜೆ ನೆರವೇರಿತು. ರಾತ್ರಿಯಿಡೀ ನಡೆದ ಉತ್ಸವದಲ್ಲಿ ಸತ್ತಿಗೆಗಳಿಗೆ ಮಾಡಲಾಗಿದ್ದ ಹೂವಿನ ಅಲಂಕಾರ ಕಣ್ಮನ ಸೆಳೆಯಿತು. ಸಿಡಿಮದ್ದು ಪ್ರದರ್ಶನ ಆಕರ್ಷಕವಾಗಿತ್ತು. 

ಸೋಮವಾರ ಬೆಳಗಿನ ಜಾವ ಲಕ್ಷ್ಮೀದೇವಿ ದೇವಸ್ಥಾನದ ಮುಂಭಾಗ ಕೊಂಡೋತ್ಸವ ನಡೆಯಿತು. 

ಬಿ.ಮಲ್ಲಯ್ಯನಪುರ, ಮೇಗಲಹುಂಡಿ, ಕೆರೆಹಳ್ಳಿ, ಪಾಳ್ಯ, ಹೆಗ್ಗವಾಡಿ, ಭುಜಗನಪುರ, ಕೋಣನೂರು, ಮುತ್ತಿಗೆ ಸೇರಿದಂತೆ ಸುತ್ತಲಿನ ಗ್ರಾಮದವರು ಜಾತ್ರೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.