ಯಳಂದೂರು: ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರೈತರು ಪರಿಣಾಮಕಾರಿಯಾಗಿ ಸದ್ಭಳಕೆ ಮಾಡಿಕೊಳ್ಳಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಜಿ.ಅಮೃತೇಶ್ವರ ಹೇಳಿದರು.
ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಪಿ.ಎಂ.ಕಿಸಾನ್ ಉತ್ಸವ್ ದಿವಸ್ ಉದ್ಘಾಟಿಸಿ ಅವರು ಮಾತನಾಡಿದರು.
‘ತಾಲ್ಲೂಕಿನಲ್ಲಿ 606 ಮಂದಿ ಹಿಡುವಳಿದಾರರನ್ನು ಒಂದೇ ಕುಟುಂಬದ ಸದಸ್ಯರೆಂದು ಗುರುತಿಸಲಾಗಿದೆ. 602 ಕೃಷಿಕರು ಇ-ಕೆವೈಸಿ ದಾಖಲೆ ಸಲ್ಲಿಸಿಲ್ಲ. ಇದರಿಂದ ಸಾಗುವಳಿದಾರರು ಆರ್ಥಿಕ ನೆರವಿನಿಂದ ವಂಚಿತರಾಗಿದ್ದಾರೆ.ಸರಿಯಾಗಿ ನೋಂದಾಯಿಸಿದ ರೈತರಿಗೆ 20ನೇ ಕಂತಿನ ಆರ್ಥಿಕ ನೆರವು ವರ್ಗಾವಣೆ ಮಾಡಲಾಗತ್ತದೆ’ ಎಂದರು.
‘ಕೃಷಿಕರು ಪತಿ, ಪತ್ನಿ ಆಧಾರ್, ಆರ್ಟಿಸಿ, ಪಡಿತರ ಚೀಟಿ ನಕಲು ಪ್ರತಿ ಸಲ್ಲಿಸಿ ಇ-ಕೆವೈಸಿಗೆ ಅರ್ಜಿ ಸಲ್ಲಿಸಬಹುದು. ಸೌಲಭ್ಯ ಪಡೆದು ಕೊಳ್ಳುತ್ತಿರುವ ಫಲಾನುಭವಿಗಳು ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರ ಹಾಗೂ ಆಧಾರ ಸಲ್ಲಿಸಬೇಕು’ ಎಂದು ತಿಳಿಸಿದರು.
‘ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ, ‘ಸರ್ಕಾರ ಹತ್ತಾರು ಯೋಜನೆಗಳನ್ನು ರೈತರಿಗೆ ಜಾರಿಗೊಳಿಸಿದೆ. ಅಂಚಿನ ಕೃಷಿಕರು ಮೊಬೈಲ್ ಬಳಸಿ ನೋಂದಾಯಿಸಿಕೊಳ್ಳಬಹುದು. ಇಲ್ಲವೆ ಇಲಾಖೆಗೆ ದಾಖಲಾತಿ ನೀಡಿದರೆ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು’ ಎಂದು ವಿವರಿಸಿದರು.
ರೈತ ಮುಖಂಡರಾದ ರಾಜಣ್ಣ, ಮಹದೇವಶೆಟ್ಟಿ, ನಂಜುಂಡಯ್ಯ, ಜೋತಿ ಹಾಗೂ ಮಹದೇವಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.