
(ಸಾಂದರ್ಭಿಕ ಚಿತ್ರ)
ಚಾಮರಾಜನಗರ: ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳ ತಂಡ ಈಚೆಗೆ ಜಿಲ್ಲೆಯಲ್ಲಿ ಖನಿಜ ನಿಕ್ಷೇಪಗಳ ಲಭ್ಯತೆ ಕುರಿತು ನಡೆಸಿದ ಪ್ರಾಥಮಿಕ ಹಂತದ ಸರ್ವೇಯಲ್ಲಿ, ಹನೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಚಿನ್ನದ ನಿಕ್ಷೇಪ ಲಭ್ಯವಾಗಬಹುದು ಎಂಬ ಸುಳಿವು ದೊರಕಿದೆ.
‘ತಾಲ್ಲೂಕಿನ ಅಜ್ಜೀಪುರ, ಕೌದಳ್ಳಿ, ಆಲತ್ತೂರು ಸೇರಿ ಹಲವು ಗ್ರಾಮಗಳಲ್ಲಿ ಚಿನ್ನ ಸಹಿತ ಹಲವು ಉಪಯುಕ್ತ ಖನಿಜಗಳು ಸಿಗುವ ಸಾಧ್ಯತೆ’ ಕುರಿತು ಹೆಚ್ಚಿನ ಸಂಶೋಧನೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
‘ಜಿಎಸ್ಐ ಅಧಿಕಾರಿಗಳು ಹಾಗೂ ಭೂವಿಜ್ಞಾನಿಗಳ ತಂಡ ರಾಜ್ಯದಾದ್ಯಂತ ಜಿಯಾಲಜಿಕಲ್ ಮ್ಯಾಪಿಂಗ್ ಹಾಗೂ ಭೂಮಿಯೊಳಗೆ ಖನಿಜಗಳನ್ನು ಪತ್ತೆ ಹಚ್ಚುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಅದರಂತೆ ಪ್ರಾಥಮಿಕ ಹಂತದ ಜಿ–ಫೋರ್ ಸರ್ವೆಯಲ್ಲಿ ಚಿನ್ನದ ಲಭ್ಯತೆಯನ್ನು ಗುರುತಿಸಿದ್ದಾರೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ರಾಜೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘6 ತಿಂಗಳು ಸಂಶೋಧನೆ ನಡೆಯಲಿದೆ. ಆ ಅವಧಿಯಲ್ಲಿ ಚಿನ್ನದ ಲಭ್ಯತೆ ಖಚಿತವಾದರೆ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ. ಚಿನ್ನವಲ್ಲದೆ, ಬೆಳ್ಳಿ, ತಾಮ್ರ ಸಹಿತ ವಿರಳ ಲೋಹಗಳ ನಿಕ್ಷೇಪ ಪತ್ತೆಯೂ ನಡೆದಿದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರದ ಎನ್ಎಂಇಟಿ ಜಂಟಿ ಪ್ರಾಯೋಜಕತ್ವದಲ್ಲಿ ಸರ್ವೆ ನಡೆಯುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.