
ಗುಂಡ್ಲುಪೇಟೆ: ಪಟ್ಟಣದ ಎಚ್.ಎಸ್.ಮಹದೇವಪ್ರಸಾದ್ ನಗರದಲ್ಲಿ ಕಸ ಸುರಿಯುತ್ತಿದ್ದ ಜಾಗವನ್ನು ಪುರಸಭೆ ಮುಖ್ಯಾಧಿಕಾರಿ ಶರವಣ ವಿಶೇಷ ಕಾಳಜಿ ವಹಿಸಿ ದಿನಪತ್ರಿಕೆ ಓದುವ ಮತ್ತು ಕಾನೂನು ಜಾಗೃತಿ ಸ್ಥಳವಾಗಿ ಪರಿವರ್ತಿಸಿದ್ದಾರೆ.
ನಿರಂತರ ಸುರಿಯುತ್ತಿದ್ದುದರಿಂದ ಅಲ್ಲಿ ಕಸ ರಾಶಿ ಇರುತ್ತಿತ್ತು. ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿರುವುದನ್ನು ಗಮನಿಸಿ ಸ್ವಚ್ಚತಾ ಕಾರ್ಯ ಕೈಗೊಂಡ ಪುರಸಭೆ ಅಧಿಕಾರಿಗಳು ನಿರುಪಯುಕ್ತ ಕಲ್ಲುಗಳನ್ನು ಬಳಸಿ ಆಸನಗಳ ವ್ಯವಸ್ಥೆ ಮಾಡುವ ಮೂಲಕ ಪತ್ರಿಕೆ ಓದುವ ಸ್ಥಳವಾಗಿ ಮಾರ್ಪಾಡು ಮಾಡಿದ್ದಾರೆ.
ಇದೇ ಜಾಗದಲ್ಲಿ ಕಾನೂನು ಅರಿವು ಮೂಡಿಸುವ ‘ ಹೇ ಗುರು! ಇನ್ಮೇಲೆ ಇಲ್ಲಿ ಕಸ ಹಾಕ್ಬೇಡ. ಓದಿ ಜಾಗೃತನಾಗು ಬೇರೆಯವರಿಗೆ ತಿಳಿಸು. ವರನಿಗೆ 21, ವಧುವಿಗೆ 18 ವರ್ಷ ಪೂರ್ಣವಾದ ಬಳಿಕವೇ ವಿವಾಹ ಮಾನ್ಯ. 14 ವರ್ಷಕ್ಕಿಂತ ಕಡಿಮೆ ಮಕ್ಕಳನ್ನು ಕೆಲಸಕ್ಕೆ ಬಳಸುವುದು ಅಪರಾಧ. 6-14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು. ವರದಕ್ಷಿಣೆ ನೀಡುವುದು– ಪಡೆಯುವುದು ಕಾನೂನುಬಾಹಿರ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ದಂಡ ಮತ್ತು ಜೈಲು ಶಿಕ್ಷೆ. ಮಹಿಳೆಯರ ಮೇಲಿನ ಗೃಹಹಿಂಸೆ ಗಂಭೀರ ಅಪರಾಧ. 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕು ಇದೆ. ಒಣ ಕಸ, ತೇವ ಕಸ ಪ್ರತ್ಯೇಕಿಸಿ ಪುರಸಭೆ ವಾಹನಕ್ಕೆ ನೀಡಿ. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ’ ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಪೊಲೀಸ್ ಸಹಾಯವಾಣಿ ಸಂಖ್ಯೆ-112, ತುರ್ತು ಸಹಾಯ 181, ಮಹಿಳಾ ಸಹಾಯವಾಣಿ- 1098 ಎಂದು ನಾಮಫಲಕ ಅಳವಡಿಸಲಾಗಿದೆ.
ಪುರಸಭೆ ಮಾಜಿ ಸದಸ್ಯ ಎಚ್.ಆರ್.ರಾಜಗೋಪಾಲ್, ಮುಖಂಡ ಅಬ್ದುಲ್ ಮಾಲಿಕ್, ರಶೀದ್, ಅಧಿಕಾರಿಗಳಾದ ಮಹೇಶ್, ಸುಷ್ಮಾ, ಮೇಸ್ತ್ರಿಮೂರ್ತಿ, ಸಿದ್ದರಾಜು ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.