ADVERTISEMENT

ಗುಂಡ್ಲುಪೇಟೆ: ಬಿಗ್ ಕ್ಯಾಟ್ ಶೃಂಗ ಸಭೆ ವಿರೋಧಿಸಿ ರೈತ ಮುಖಂಡರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 8:07 IST
Last Updated 12 ಫೆಬ್ರುವರಿ 2026, 8:07 IST
ಗುಂಡ್ಲುಪೇಟೆ ಪಟ್ಟಣದ ಹಳೇ ಪ್ರವಾಸಿ ಮಂದಿರದ ಮುಂದೆ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ‌ನಡೆಸಿದರು. ಈ ವೇಳೆ ಡಿವೈಎಸ್ಪಿ ಸ್ನೇಹಾರಾಜ್ ಮತ್ತು ರೈತರ ನಡುವೆ ವಾಗ್ವಾದ ನಡೆಯಿತು 
ಗುಂಡ್ಲುಪೇಟೆ ಪಟ್ಟಣದ ಹಳೇ ಪ್ರವಾಸಿ ಮಂದಿರದ ಮುಂದೆ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ‌ನಡೆಸಿದರು. ಈ ವೇಳೆ ಡಿವೈಎಸ್ಪಿ ಸ್ನೇಹಾರಾಜ್ ಮತ್ತು ರೈತರ ನಡುವೆ ವಾಗ್ವಾದ ನಡೆಯಿತು    

ಗುಂಡ್ಲುಪೇಟೆ: ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ‘ಬಿಗ್ ಕ್ಯಾಟ್ ಶೃಂಗ ಸಭೆ’ ವಿರೋಧಿಸಿ ಪಟ್ಟಣದಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಹಳೇ ಪ್ರವಾಸಿ ಮಂದಿರದ ಮುಂದೆ ಜಮಾವಣೆಗೊಂಡ ಸಂಘದ ಪದಾಧಿಕಾರಿಗಳು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ  ಘೋಷಣೆ ಕೂಗಿದರು. 

 ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ‘ಪ್ರಕೃತಿ ಸಂಪತ್ತು ಬಂಡೀಪುರ ಅರಣ್ಯವನ್ನು ಕೇಂದ್ರ ಸರ್ಕಾರ ಜಾಗತಿಕ ಬಿಗ್ ಕ್ಯಾಟ್ ಸಮ್ಮೇಳನದ ಹೆಸರಿನಲ್ಲಿ ಖಾಸಗೀಕರಣ ‌ಮಾಡುವ ಪ್ರಯುಕ್ತ ಕಾರ್ಯಾಗಾರ ಆಯೋಜಿಸಿರುವುದು ಖಂಡನೀಯ. 24 ದೇಶಗಳೊಂದಿಗೆ ಒಪ್ಪಂದಕ್ಕೆ ಸಹಿ ಪಡೆದಿರುವ ಕೇಂದ್ರ ಸರ್ಕಾರದ ನಡೆ ಅವೈಜ್ಞಾನಿಕ.  ವಿದೇಶಗಳಿಂದ ಕಾರ್ಯಾಗಾರಕ್ಕೆ ಆಗಮಿಸಿರುವ ಪ್ರಮುಖರಿಬ್ಬರ ಭೇಟಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ರೈತ ಮುಖಂಡ ಮಂಜು ಕಿರಣ್ ಮಾತನಾಡಿ, ‘ಪಾಶ್ಚಿಮಾತ್ಯ ರಾಷ್ಟ್ರದ ಪ್ರತಿನಿಧಿಗಳು ಅರಣ್ಯ ಸಂರಕ್ಷಣೆ ಮಾಡುವ ನೆಪದಲ್ಲಿ ನಮ್ಮ ಕಾಡನ್ನು ತೋರಿಸಿ ಹಣ ಮಾಡುತಿದ್ದಾರೆ. ಮುಂದಿನ ದಿನಗಳಲ್ಲಿ ‌ಬಂಡೀಪುರ ಅರಣ್ಯಕ್ಕೆ ಕಾಂಪೌಂಡ್ ನಿರ್ಮಿಸಿ ಹಣ ವಸೂಲಿ ಮಾಡುವ ದಿನ ದೂರವಿಲ್ಲ’ಎಂದು ಕಿಡಿಕಾರಿದರು.

‘ಕೇಂದ್ರ ಸರ್ಕಾರದ ಆದೇಶದಂತೆ ಬಿಗ್ ಕ್ಯಾಟ್ ಶೃಂಗ ಸಭೆ  ನಡೆಯುತ್ತಿದ್ದು,  ಅಹವಾಲುಗಳನ್ನು ನನಗೆ ಅಥವಾ ತಹಶೀಲ್ದಾರ್‌ಗೆ ನೀಡಿದರೆ ಇ ಮಾಹಿತಿ ನೀಡುತ್ತೇನೆ.  ಸಭೆ ನಡೆಯುತ್ತಿರುವ ಸ್ಥಳಕ್ಕೆ ತೆರಳಲು ಅವಕಾಶ ನೀಡುವುದಿಲ್ಲ’ ಎಂದು ಡಿವೈಎಸ್ಪಿ ಸ್ನೇಹಾರಾಜ್ ತಿಳಿಸಿದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಪೊಲೀಸರ ಮಾತಿಗೂ ಬಗ್ಗದ‌ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ‌ಧರಣಿಗೆ ಮುಂದಾದರು.  ಪ್ರತಿಭಟನಾಕಾರರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂಧಿಸಿ, ತೆರಕಣಾಂಬಿ ಪೊಲೀಸ್ ಠಾಣೆಗೆ ಕರೆದೊಯ್ದರು.  ಸಂಘಟನೆ ಮುಖಂಡರಾದ ಷಣ್ಮುಖಸ್ವಾಮಿ, ಮಾಡ್ರಹಳ್ಳಿ ಪಾಪಣ್ಣ, ಭೀಮನಬೀಡು ರಾಜು, ಗುರು, ಸಿದ್ದಪ್ಪ, ಕಂದೇಗಾಲ ಮಾದಪ್ಪ , ಹಲವು ಮಂದಿ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.