
ಹನೂರು: ‘ ಮಕ್ಕಳಿಗೆ ವೈಚಾರಿಕ ಹಾಗೂ ವೈಜ್ಞಾನಿಕ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ತಿಳಿಸಿದರು.
ದಿನ್ನಳ್ಳಿ ಉರ್ದು ಶಾಲೆಯಲ್ಲಿ ಆಯೋಜಿಸಿದ್ದ ‘ದಿ ಯುನಿವರ್ಸ್ ಇನ್ ಎ ನಟ್ ಶೆಲ್’ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಹಂತದಲ್ಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ, ಮೂಢನಂಬಿಕೆಯಿಂದ ಹೋರತರಬೇಕಿದೆ ಎಂದರು.
ಬ್ರಹ್ಮಾಂಡದ ಪ್ರಮುಖ ವೈಜ್ಞಾನಿಕ ತತ್ವಗಳನ್ನು ವಿದ್ಯಾರ್ಥಿಗಳಿಗೆ ಸರಳ, ಸೃಜನಾತ್ಮಕ ರೀತಿಯಲ್ಲಿ ಪರಿಚಯಿಸಿರುವುದು, ಅಕ್ರಿಲಿಕ್ ದೃಶ್ಯಾವಳಿಗಳು, ಮಾಹಿತಿ ಫಲಕಗಳು, ಸುಂದರ ವಿನ್ಯಾಸಗೊಳಿಸಿದ ಮಾದರಿಗಳು ಸಂಕೀರ್ಣ ಖಗೋಳದ ತತ್ವಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತಿದೆ. ವಿದ್ಯಾರ್ಥಿಗಳು ಸೌರಮಂಡಲ, ಗ್ಯಾಲಕ್ಸಿಗಳು, ಗ್ರಹಣಗಳು, ಭೂಮಿ ಮತ್ತು ಸೂರ್ಯನ ರಚನೆ ಸೇರಿದಂತೆ ವಿಷಯಗಳನ್ನು ಆತ್ಮವಿಶ್ವಾಸದಿಂದ ವಿವರಿಸುತ್ತಿದ್ದುದೂ ಹೆಮ್ಮೆಯ ವಿಷಯ ಎಂದರು.
ಫೆಬ್ರುವರಿ 12 ರಂದು ತಾಲ್ಲೂಕಿನ ಎಲ್ಲಾ ಶಾಲೆಗಳಿಗಾಗಿ ಪ್ರದರ್ಶನವು ಮುಕ್ತವಾಗಿದೆ. ಆರ್ಸಿ ವೆಂಕಟೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೆಗೌಡ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮಲ್ಲು, ಮುಖ್ಯಶಿಕ್ಷಕಿ ಉಜ್ಮಾ ಮೊಹಮ್ಮದಿ, ಶಿಕ್ಷಕರಾದ ಪೊನ್ನು ಸ್ವಾಮಿ, ಅಭಿಲಾಷ, ಮಾಲಾಶ್ರೀ, ಹಾಗೂ ವೃಂದಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.