
ಹನೂರು ಪಟ್ಟಣದಲ್ಲಿ ಶಾಸಕ ಎಂ.ಆರ್.ಮಂಜುನಾಥ್ ನಾಗಣ್ಣ ನಗರ ಗ್ರಾಮಸ್ಥರ ಸಮಸ್ಯೆ ಆಲಿಸಿದರು
ಹನೂರು: ‘ನಾಗಣ್ಣ ನಗರ ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು’ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ನಾಗಣ್ಣ ನಗರ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ‘ಕಂದಾಯ ಗ್ರಾಮವಾದರೆ ಜನರಿಗೆ ಸರ್ಕಾರದ ಸವಲತ್ತು ಮತ್ತಷ್ಟು ಸಿಗಲಿದೆ. ಇಲ್ಲಿಯ ಜನರಿಗೆ ಡಿಮ್ಯಾಂಡ್, ರಿಜಿಸ್ಟರ್, ಇ ಸ್ವತ್ತು ಸಿಗುತ್ತಿಲ್ಲ ಎಂಬ ಸಮಸ್ಯೆ ತಲೆದೂರಿದೆ. ಅಂಗನವಾಡಿ, ಶಾಲಾ ಕಟ್ಟಡ ಶಿಥಿಲವಾಗಿದೆ. ಈ ಸಮಸ್ಯೆಗಳನ್ನು ಸರಿಪಡಿಸಲು ಹಾಗೂ ಜನರಿಗೆ ಅನುಕೂಲ ಕಲ್ಪಿಸಿ ಗ್ರಾಮ ಅಭಿವೃದ್ಧಿ ಪಡಿಸಲು ಶ್ರಮಿಸಲಾಗುತ್ತಿದೆ’ ಎಂದರು.
ನಾಗಣ್ಣ ನಗರ ಗ್ರಾಮ ಅಭಿವೃದ್ಧಿಗೆ ಹಾಗೂ ಜನರಿಗೆ ಅಗತ್ಯವಾಗಿ ಬೇಕಾದಂತಹ ಚರಂಡಿ ಕುಡಿಯುವ ನೀರು ಹಾಗೂ ವಿದ್ಯುತ್ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೆತ್ತಿಕೊಳ್ಳಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.
ಸದ್ಯಕ್ಕೆ ಪಡಿತರ ಚೀಟಿ, ವಿದ್ಯುತ್, ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಇನ್ನಿತರ ಸೌಕರ್ಯ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಲಾಗಿದ್ದು, ಅಗತ್ಯ ಕ್ರಮ ವಹಿಸಲಿದ್ದಾರೆ. ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಶ್ರನಿಸಲಾಗುತ್ತಿದೆ ಎಂದರು.
ರಾಮಪುರದಿಂದ ನಾಗಣ್ಣನಗರ ಮಾರ್ಗವಾಗಿ ಬೆಳಿಗ್ಗೆ ಶಾಲೆಗೆ ತೆರಳಲು ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮನವಿಯನ್ನು ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಸಾರಿಗೆ ವ್ಯವಸ್ಥಾಪಕರನ್ನು ಸ್ಥಳಕ್ಕೆ ಕರೆಸಿ ಶಾಲಾ ಮಕ್ಕಳಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ನಾಗಣ್ಣನಗರದ ಜನರಿಗೆ ಶೌಚಗೃಹ ಹಾಗೂ ಪಡಿತರ ಚೀಟಿ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಒದಗಿಸಬೇಕು. ಜನರ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಪಿಡಿಒ ಪುಷ್ಪಲತಾ ಅವರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.
ರಾಮಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಕುಂಜುಮಾನ್ ಹಾರಯಮ್ಮ, ಮುರುಗೇಶ್, ಸುರೇಂದ್ರ, ಮುರುಗೇಶ್, ಮಹದೇವಮ್ಮ, ಸುಗುಣ, ಮಾದಮ್ಮ, ಲಕ್ಷ್ಮಿ, ಭಾಗ್ಯಮ್ಮ, ಪೆರಿಯಮ್ಮ, ಶಾರದಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.