
ಕೊಳ್ಳೇಗಾಲ: ಮಹಾ ಶಿವರಾತ್ರಿ ನಿಮಿತ್ತ ಇಲ್ಲಿನ ಮುಳ್ಳೂರು ರಸ್ತೆಯ ಶಿವರಾವಳೇಶ್ವರಸ್ವಾಮಿ ಮತ್ತು ರಾಕಾಸಮ್ಮ ದೇವಸ್ಥಾನದಲ್ಲಿ ಸೋಮವಾರ ವಿಜೃಂಭಣೆಯಿಂದ ತಂಪು ಉತ್ಸವ ನೆರವೇರಿತು.
ನಗರದ ಭೀಮನಗರ ಬಡಾವಣೆಯ ಕಲ್ಲುಬಾವಿ ಬೀದಿಯ ಸಾಲಹಟ್ಟಿ ಕೇರಿಯ ನೂರಾರು ಭಕ್ತರು ಮಂಗಳವಾಧ್ಯ ಸಮೇತ ಬೆಳಿಗ್ಗೆ ತಂಬಿಟ್ಟಿನಿಂದ ತಯಾರಿಸಿದ ತಂಪನ್ನು ಹಿಡಿದು ದೇಗುಲಕ್ಕೆ ಮೆರವಣಿಗೆ ಸಾಗಿದರು.
ಪ್ರಧಾನ ಅರ್ಚಕ ಮಹದೇವ ಹಾಗೂ ಅರ್ಚಕ ಜಗದೀಶ್ ಶಾಸ್ತ್ರಿ ಅವರು ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ನೆರೆದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿದರು. ಇದೇ ವೇಳೆ ಭಕ್ತರು, ದೇವಾಲಯದಲ್ಲಿನ ವಿಘ್ನೇಶ್ವರ ಮತ್ತು ಪಾರ್ವತಿ ದೇವಿಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಶಿವರಾವಳೇಶ್ವರ ಸ್ವಾಮಿ ಮತ್ತು ರಾಕಾಸಮ್ಮ ದೇವಿಗೆ ಹಣ್ಣು, ಕಾಯಿ ನೀಡಿ ಶ್ರದ್ಧಾಭಕ್ತಿಯಿಂದ ಭಕ್ತಿ ಸಮರ್ಪಿಸಿದರು. ಬಳಿಕ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು.
ಮಹಾ ಶಿವರಾತ್ರಿ ಹಬ್ಬದ ನಿಮಿತ್ತ ಸಾಲಹಟ್ಟಿ ಕೇರಿ ಭಕ್ತರು ಮಾರನೇ ದಿನ ದೇಗುಲದಲ್ಲಿ ಭಕ್ತಿಭಾವದಿಂದ ಪೂಜೆ ಸಲ್ಲಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಿಸುವ ಸಂಪ್ರದಾಯ ಬಹಳ ವರ್ಷದಿಂದ ನಡೆದು ಬಂದಿದ್ದು, ಹಬ್ಬದ ನಿಮಿತ್ತ ದೇಗುಲವನ್ನು ವಿವಿಧ ಹೂವು ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಮಹೇಶ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತಂಪು ಉತ್ಸವದಲ್ಲಿ ಸಾಲಟ್ಟಿಕೇರಿ ಮುಖಂಡ ಮಹಾದೇವಸ್ವಾಮಿ, ಸುರೇಶ್, ಪ್ರಭು, ಶಿವಪ್ಪ, ಶಿವರಾಜ್, ನಿಂಗರಾಜ್, ಚಿಕ್ಕಮಾಳಿಗೆ, ನಟರಾಜು, ರಾಜಶೇಖರಮೂರ್ತಿ, ಶಿವಮಲ್ಲು, ಲಿಂಗರಾಜ್, ನಗರಸಭಾ ಮಾಜಿ ಸದಸ್ಯರಾದ ಎಸ್.ಮಂಜುನಾಥ್, ಶಾಂತರಾಜು, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಮುಖಂಡರಾದ ಶಿವಮೂರ್ತಿ, ಸುರೇಶ್, ದಿಲೀಪ್ ಸಿದ್ದಪ್ಪಾಜಿ, ಶ್ರೀಧರ್, ಶಿವು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.